ಬೆಂಗಳೂರು,ಜು.13- ನನಗೆ ಯಾವುದೇ ಹುಟ್ಟುಹಬ್ಬದ ಉತ್ಸವಗಳು ಬೇಡ. ಪಕ್ಷದ ಉತ್ಸವಗಳು ನಡೆಯಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಅಭಿಮಾನಿಗಳು ಶಿವಕುಮಾರೋತ್ಸವ ನಡೆಯಬೇಕು ಎಂದು ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ನನಗೆ ಬೇರೆ ಯಾವ ಉತ್ಸವಗಳು ಬೇಕಿಲ್ಲ. ಈ ಮೊದಲು ನನ್ನ ಹುಟ್ಟಹಬ್ಬವನ್ನು ನಾನು ಸರಳವಾಗಿ ಕೇದಾರನಾಥ ಕ್ಷೇತ್ರದಲ್ಲಿ ಆಚರಿಸಿಕೊಂಡಿದ್ದಾರೆ.
ಸಿದ್ದರಾಮೋತ್ಸವ ವಿಷಯದಲ್ಲಿ ನಮಗೆ ಯಾವ ಆಕ್ಷೇಪಗಳು ಇಲ್ಲ. ನನ್ನ ಅತಿಥಿಯಾಗಿ ಕರೆದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಮಾಧ್ಯಮಗಳು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿವೆ. ನಾವ್ಯಾರು ಭಿನ್ನಾಭಿಪ್ರಾಯ, ವಿರೋಧಗಳನ್ನು ವ್ಯಕ್ತಪಡಿಸಿಲ್ಲ. ಬಿಜೆಪಿಯವರು ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ನಾನು ಪಕ್ಷದ ಅಧ್ಯಕ್ಷನಾದಾಗಲೇ ವ್ಯಕ್ತಿ ಪೂಜೆ ಬೇಡ. ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ 75 ನೇ ವರ್ಷದ ಸ್ವಾಂತಂತ್ರೋತ್ಸವ ಆಚರಿಸುತ್ತಿದೆ. ಸಂಭ್ರಮ ದೇಶದ ಉತ್ಸವವಾಗಬೇಕು. ಅದಕ್ಕಾಗಿ ಪೂರ್ವ ಭಾವಿ ಸಭೆ ನಡೆಸುತ್ತಿದ್ದೇನೆ ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾಯಕರು ಪರಸ್ಪರ ಭೇಟಿ ಮಾಡುವುದು ಸಹಜ. ಅದಕ್ಕೆ ರಾಜಕೀಯ ಬಣ್ಣ ಅನಗತ್ಯ ಎಂದು ಹೇಳಿದರು.
ಚುನಾವಣೆ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ಇಲ್ಲವಾಗುತ್ತವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬರೀ 10-15 ವರ್ಷ ಅಷ್ಟೇ ಏಕೆ ಇನ್ನು ದೀರ್ಘ ಕಾಲ ಅವರು ಅಕಾರದಲ್ಲಿ ಇರಲಿ ಎಂದು ಲೇವಡಿ ಮಾಡಿದರು.