ಬೆಂಗಳೂರು,ಸೆ.15-ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಯಾರ್ಯಾರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಇದೇ ಅಧಿವೇಶನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೆಯೇ , ಇಲ್ಲ ನಾನು ತಪ್ಪು ಮಾಡಿದ್ದೇನೆಯೇ ಅಥವಾ ನಮ್ಮ ಸಂಪುಟ ಸಹೋದ್ಯೋಗಿಗಳು ಮಾಡಿದ್ದಾರೆಯೇ ಎಂಬುದರ ಕುರಿತು ಯಾರ್ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ
ಅವರೆಲ್ಲರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಇದನ್ನೂ ಓದಿ : BIG NEWS : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕಾರು ಅಪಘಾತ, ಗಂಭೀರ ಗಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕಲೆಹಾಕಿ ದಾಖಲೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ಕೂಡ ಅಗತ್ಯವಿರುವ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಕೆರೆಗಳನ್ನು ನುಂಗಿದ ಮೂಲ ಪುರುಷರು ಯಾರು, ಯಾವ ಯಾವ ಸರ್ಕಾರದಲ್ಲಿ ಎಷ್ಟೆಷ್ಟು ಒತ್ತುವರಿಯಾಗಿದೆ ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
ವಿಧಾನಸಭೆಯ ಸಭಾಧ್ಯಕ್ಷರ ಬಳಿ ಚರ್ಚಿಸಿ ಸಮಯ ನಿಗದಿಪಡಿಸಬೇಕೆಂದು ಮನವಿ ಮಾಡುತ್ತೇವೆ. ಅವರು ಯಾವ ಸಮಯ ನಿಗದಿಪಡಿಸುತ್ತಾರೋ ಅಂದೇ ಬಿಡಗಡೆ ಮಾಡುತ್ತೇನೆ ಎಂದರು.
ಅಧಿಕಾರಿಗಳ ಮೇಲೆ ಕೆಲವರು ಒತ್ತಡ ಹಾಕಿ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಿದ ಪರಿಣಾಮ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ. ಕೆರೆಗಳನ್ನು ಮುಚ್ಚಿದ ಪರಿಣಾಮ ನೀರು ಸರಾಗವಾಗಿ ಹರಿಯದೆ ರಾಜಕಾಲುವೆಗೆ ಹೋಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಯಾವ ಕಾಲದಲ್ಲಿ ಯಾವ ಸರ್ಕಾರ, ಯಾವ ಮುಖ್ಯಮಂತ್ರಿಗಳು, ಅಧಿಕಾರಿಗಳು ಅನುಮೋದನೆ ಕೊಟ್ಟಿದ್ದರು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಸದನದಲ್ಲಿ ಇದನ್ನು ಬಹಿರಂಗಪಡಿಸುವುದಾಗಿ ಹೇಳಿದರು.
ಪ್ರಸ್ತುತ ಅಧಿವೇಶನದಲ್ಲಿ ಪ್ರವಾಹ ಪರಿಸ್ಥಿತಿ ಕುರಿಂತೆ ಚರ್ಚೆ ನಡೆಯುತ್ತಿದೆ. ಕಂದಾಯ ಸಚಿವನಾಗಿ ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಚರ್ಚೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದರು.
ರಾಜ್ಯದ ವಿವಿಧ ಕಡೆ ಸರ್ಕಾರಕ್ಕೆ ಸೇರಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಬೆಂಗಳೂರಿನಲ್ಲೂ ಸಾಕಷ್ಟು ಭೂ ಕಬಳಿಕೆಯಾಗಿದೆ. ಇದೆಲ್ಲದರ ಬಗ್ಗೆ ಸದನದಲ್ಲಿ ದಾಖಲೆಗಳ ಸಮೇತ ನುಂಗಣ್ಣರ ಹೆಸರುಗಳನ್ನು ಬಹಿರಂಗಪಡಿಸಬೇಕಿದೆ. ಸಭಾಧ್ಯಕ್ಷರ ಅನುಮತಿ ಸಿಕ್ಕ ಕೂಡಲೇ ಎಲ್ಲವನ್ನು ಬಯಲು ಮಾಡುತ್ತೇವೆ ಎಂದು ಹೇಳಿದರು.