ಲಕ್ಕಿಂಪುರ್ಖೇರಿ, ಜ.3- ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ಉತ್ತರ ಪ್ರದೇಶ ಪೊಲೀಸರು, ಕೇಂದ್ರದ ಗೃಹಖಾತೆ ರಾಜ್ಯ ಸಚಿವರ ಪುತ್ರನನ್ನು ಸೇರಿದಂತೆ ಹಲವು ಆರೋಪಿಗಳನ್ನು ಗುರುತಿಸುವ 5 ಸಾವಿರ ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ್ಟಿದ್ದ ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಲಕ್ಕಿಂಪುರ್ನಲ್ಲಿ ರೈತರು ಅ.3ರಂದು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ರೈತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ಮಿಶ್ರಾ ಅವರ ಪುತ್ರ ಅಶಿಶ್ ಮಿಶ್ರಾ ಮತ್ತು ಸಂಗಡಿಗರು ಕಾರು ಹರಿಸಿದ ಆರೋಪ ಕೇಳಿಬಂದಿತ್ತು. ಘಟನೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದರು.
ಅವರಲ್ಲಿ ನಾಲ್ಕು ಮಂದಿ ರೈತರು, ಉಳಿದವರು ಬಿಜೆಪಿ ಕಾರ್ಯಕರ್ತರಾಗಿದ್ದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅಂದು ಲಕ್ಕಿಂಪುರ್ಖೇರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ರೈತರ ಪ್ರತಿಭಟನೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕಾಗಿ ಜೀಪ್ ಹರಿಸಿರುವ ಆರೋಪಗಳಿದ್ದವು.
ಘಟನೆ ನಡೆದಾಗ ಆಶಿಶ್ ಮಿಶ್ರಾ ಸ್ಥಳದಲ್ಲೀಯೇ ಇದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಹಲವಾರು ವಿಡಿಯೋ ದಾಖಲಾತಿಗಳು ಮತ್ತು 10 ಮಂದಿಯ ಪ್ರಮಾಣಿಕೃತ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯೊಂದಿಗೆ ಸೇರಿಸಲಾಗಿದೆ. ಈ ಮೂಲಕ ಪ್ರಕರಣ ತಾರ್ಕಿಕ ಅಂತ್ಯದತ್ತ ಹೆಚ್ಚಿ ಇಟ್ಟಿದೆ.
