ಬೆಂಗಳೂರು,ಸೆ.19- ಪರಿಸರಕ್ಕೆ ಗಂಭೀರ ಸವಾಲೊಡ್ಡುವ ಪ್ಲಾಸ್ಟಿಕ್ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. ವಿಧಾನಪರಿಷತ್ನಲ್ಲಿ ಸದಸ್ಯರಾದ ಮುನಿರಾಜು ಗೌಡ ಮತ್ತು ಪ್ರಕಾಶ್ ಕೆ.ರಾಥೋಡ್ ಅವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಪ್ರತಿದಿನ 830.36 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಬೆಂಗಳೂರುವೊಂದರಲ್ಲೆ 317.42 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದರು.
2016 ಮಾರ್ಚ್ 11ರಂದು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆಯನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. 100 ಮೈಕ್ರೈನ್ಗಿಂತಲೂ ಕಡಿಮೆ ದಪ್ಪದ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಈವರೆಗೂ 9 ಸಾವಿರ ದಾಳಿಗಳು ನಡೆದಿವೆ.
ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
ಹಂತ ಹಂತವಾಗಿ ದಂಡದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. 4.33 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಜನಜಾಗೃತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 2021ರ ಆಗಸ್ಟ್ 12ರಂದು ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಹೇಳಿದರು.
ಸದಸ್ಯ ಮುನಿರಾಜು ಗೌಡ ಅವರು, ಹಾಲು, ಮೊಸರು, ಮಜ್ಜಿಗೆ ಅಡುಗೆ ಎಣ್ಣೆ, ಶಾಂಪು ಬಾಟಲ್ ಮುಂತಾದ ಪಾಕೆಟ್ಗಳ ಮೇಲೆ 5ರಿಂದ 10 ರೂ. ಶುಲ್ಕ ವಿಸಿ, ಉಪಯೋಗಿಸಿದ ಪಾಕೆಟ್, ಬಾಟೆಲ್ಗಳನ್ನು ಹಿಂದಿರುಗಿಸಿದ ನಂತರ ಹೆಚ್ಚುವರಿ ಹಣವನ್ನು ವಾಪಸ್ ಮಾಡುವ ನಿಯಮ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಪ್ರಕಾಶ್ ರಾಥೋಡ್ ಅವರು, ಸದನದಲ್ಲಿ ನೀಡಲಾಗಿರುವ ಸ್ಯಾನಿಟೈಸರ್ ಕೂಡ ಪ್ಲಾಸ್ಟಿಕ್ ಬಾಟಲ್ನಲ್ಲಿದೆ. ನನಗೆ ಇರುವ ಮಾಹಿತಿ ಪ್ರಕಾರ ಪ್ರತಿದಿನ 3 ಲಕ್ಷ ಟನ್ ನಿರ್ಮಾಣವಾಗುತ್ತಿದೆ. ತ್ಯಾಜ್ಯ ಕೇವಲ 830.36 ಅಷ್ಟೇ ಅಲ್ಲ ಎಂದಾಗ ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.