ಬೆಂಗಳೂರು,ಮಾ.15- ಜನಸಂಖ್ಯೆಗೆ ಅನುಗುಣವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯಿತ ವೀರಶೈವ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು, ಇಲ್ಲವಾದರೆ ಸಮುದಾಯ ಬೇರೆಯ ರೀತಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ರಾಜಾಜಿನಗರದ ಸಿದ್ದಗಂಗಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಬಳಗ ಮತ್ತು ವಿಶ್ವ ವೀರಶೈವ ಯುವ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಜನಸಂಖ್ಯೆ 1ಕೋಟಿ 50ಲಕ್ಷದಷ್ಟಿದೆ. ಹಳೆ ಮೈಸೂರು ಭಾಗವಾದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪರು, ಹಾಸನ, ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಶೇ.30ರಷ್ಟು, ವರುಣಾದಲ್ಲಿ ಶೇ.70ರಷ್ಟು, ಬಾದಾಮಿಯಲ್ಲಿ ಕೋಲಾರ, ಬಾದಾಮಿಯಲ್ಲೂ ಶೇ.30ರಷ್ಟು ಮತದಾರರಿದ್ದಾರೆ. ವೀರಶೈವ ಲಿಂಗಾಯಿತರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಆನ್ಯಾಯವಾದರೆ ಸುಮ್ಮನ್ನೆ ಕೂರುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಬೆಂಗಳೂರುನಗರದ 28ವಿಧಾನಸಭಾ ಕ್ಷೇತ್ರದಲ್ಲಿ 25ಲಕ್ಷಕ್ಕೂ ಹೆಚ್ಚು ಜನರು ವೀರಶೈವ ಲಿಂಗಾಯಿತ ಮತದಾರರಿದ್ದಾರೆ. ಈವರೆಗೂ ಎರಡು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 51 ಸಾವಿರಕ್ಕೂ ಹೆಚ್ಚಿನ ಮತದಾರರಿದ್ದಾರೆ. 1956ರಿಂದ ಇದುವರಗೆ ಬೆಂಗಳೂರುನಗರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಈ ಬಾರಿ ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯಿತ ವೀರಶೈವ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಸಮುದಾಯವನ್ನು ಕಡೆಗಣಿಸಿದರೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ನಿರ್ಣಯ ಕೈಗೊಂಡು ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಂತೇಶ್ ಪಾಟೀಲ್, ಸಮಾಜದ ಮುಖಂಡರಾದ ಗುರುಸ್ವಾಮಿ, ವಿಶ್ವನಾಥ, ಶೋಭಾ, ಪ್ರಶಾಂತ್ ಕಲ್ಲೂರು, ಮಹಾಲಿಂಗಪ್ಪ, ಸಾಹಿತಿ ಮಹದೇವಪ್ಪ ಚಿಕ್ಕಹೆಜ್ಜಾಜಿ, ರಾಹುಲ್ ಮಲ್ಲಿಕಾರ್ಜುನ್, ಡಾ.ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.
#lingayat, #veerashaiva, #assemblyelections,