ಬೆಂಗಳೂರು,ಜ.12-ನಗರದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ ಆದರೂ ಲಾಕ್ಡೌನ್ ಜಾರಿ ಬಗ್ಗೆ ಯಾವುದೆ ಚರ್ಚೆ ನಡೆದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಭವಿಷ್ಯದಲ್ಲಿ ಸೋಂಕು ಮತ್ತಷ್ಟು ಹೆಚ್ಚುವುದು ಖಚಿತ. ಸೋಂಕು ಹರಡುವಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಲಾಕ್ಡೌನ್ ಜಾರಿ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸೋಂಕು ಹರಡದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಜನರ ಓಡಾಟ ತಪ್ಪಿಸಬೇಕಿದೆ ಎಂದು ಅವರು ಸಲಹೆ ನೀಡಿದರು. ಈ ಕುರಿತಂತೆ ಅಪಾರ್ಟ್ಮೆಂಟ್ ಮಾಲೀಕರು, ರೆಸಿಡೆಂಟ್ ವೇಲ್ಫೇರ್ ಅಸೋಸಿಯೇಷನ್ಸ್ನವರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಅವರು ಕಿವಿಮಾತು ಹೇಳಿದರು.
ನಗರದಲ್ಲಿ ಪ್ರತಿನಿತ್ಯ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಸೋಂಕು ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸೋಂಕಿತರ ಬಿಯು ನಂಬರ್ ತಡವಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಸಕಾಲದಲ್ಲೇ ಜನರೇಟ್ ಆಗುತ್ತಿದೆ. ಯಾವುದೆ ತೊಂದರೆ ಆಗಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಜನಸಂದಣಿ ಹೆಚ್ಚಿರುವ ಮಾರುಕಟ್ಟೆಗಳನ್ನು ವಿಕೇಂದ್ರಿಕರಣ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಮಾರುಕಟ್ಟೆಗಳ ಒಂದು ಕಿ.ಮೀ ಸುತ್ತಳತೆ ದೂರದಲ್ಲೇ ಮಾರುಕಟ್ಟೆಗಳನ್ನು ಸ್ಥಳಾಂತರಿಸಲಾಗುವುದು ಹೀಗಾಗಿ ಯಾರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದರು.
