xಬೆಂಗಳೂರು.ಅ.2-ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಮಹದೇವಪುರ ಠಾಣೆ ಪೊಲೀಸರು ಆತನಿಂದ ಎಂಟು ಲಕ್ಷ ಮೌಲ್ಯದ 164 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ ಭೀಮಶಕ್ತಿ ನಗರದ ನಿವಾಸಿ ಚೇತನ್ಕುಮಾರ್ ಅಲಿಯಾಸ್ ಚೇತನ್(23)ಬಂಧಿತ ಆರೋಪಿ.
ಕೆಲವು ದಿನಗಳ ಹಿಂದೆ ಮಹದೇವ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ಬಯ್ಯ ಲೇಔಟ್ನಲ್ಲಿರುವ ಮನೆ ಯೊಂದರ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಕುರಿತಂತೆ ದಾಖಲಾದ ದೂರಿನ ಆಧಾರದ ಮೇಲೆ ಕಾರ್ಯಚರಣೆ ನಡೆಸಿದ ಮಹದೇವಪುರ ಪೊಲೀಸರು ಮನೆ ಕಳ್ಳತನ ಮಾಡಿದ್ದ ಆರೋಪಿ ಚೇತನ್ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಸಹಚರನೊಂದಿಗೆ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಇದರ ಜೊತೆಗೆ ಕೆಲ ದಿನಗಳ ಹಿಂದೆ ಟಿನ್ ಫ್ಯಾಕ್ಟರಿ ಸಮೀಪ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.
ಡಿಸಿಪಿ ಗಿರೀಶ್ ಹಾಗೂ ಎಸಿಪಿ ಶಾಂತಮಲ್ಲಪ್ಪ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.