ಅಹಮದಾಬಾದ್,ಫೆ.20- ನಗರದಲ್ಲಿ 2002ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ 38 ತಪ್ಪಿತಸ್ಥರಿಗೆ ನೀಡಿರುವ ಗಲ್ಲು ಶಿಕ್ಷೆ ಸಮರ್ಥನೀಯವಾಗಿದ್ದು, ಇಂಥವರನ್ನು ಸಮಾಜದಲ್ಲಿ ಇರಲು ಬಿಟ್ಟರೆ ನರಭಕ್ಷಕ ಚಿರತೆಯನ್ನು ಸಾರ್ವಜನಿಕರ ನಡುವೆ ಬಿಡುಗಡೆ ಮಾಡಿದಂತಾಗುತ್ತದೆ.ಅಂಥ ಚಿರತೆ ಅಮಾಯಕರನ್ನು ತಿಂದು ಹಾಕುತ್ತದೆ ಎಂದು ಇಲ್ಲಿನ ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ನಿನ್ನೆ ಲಭಿಸಿರುವ ತೀರ್ಪಿನ ಪ್ರತಿಯಲ್ಲಿ ನ್ಯಾಯಾಲಯವು ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ವರ್ಗದಲ್ಲಿ ಬರುವುದರಿಂದ ತಾನು ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವುದು ಸೂಕ್ತವಾಗಿದೆ ಎಂದು ತಿಳಿಸಿದೆ.
56 ಜನರು ಸಾವಿಗೀಡಾಗಲು, 200ಕ್ಕೂ ಅಧಿಕ ಮಂದಿ ಗಾಯಗೊಳ್ಳಲು ಕಾರಣವಾದ 2008ರ ಜುಲೈ 26ರಂದು ಸಂಭವಿಸಿದ ಅಹಮದಾಬಾದ್ ಬಾಂಬ್ ಸರಣಿ ಸ್ಫೋಟ ಪ್ರಕರಣದ ಹೊಣೆಗಾರರಾದ ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋತ್ಪಾದಕ ಸಂಘಟನೆಯ 38 ಅಪರಾಗಳಿಗೆ ಗಲ್ಲು ಶಿಕ್ಷೆ ಮತ್ತು ಇತರ 11 ಮಂದಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿತ್ತು. ನ್ಯಾಯಾಲಯದಲ್ಲಿ ಏಕಕಾಲದಲ್ಲಿ ಇಷ್ಟು ಜನರಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಇದೇ ಮೊದಲ ಬಾರಿಯಾಗಿದೆ.
