ಬೆಂಗಳೂರು,ಫೆ.9- ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರಿಗೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಅಬಕಾರಿ ಸಚಿವ ಗೋಪಾಲಯ್ಯ ಅವರಿಗೆ ಉಸ್ತುವಾರಿ ನೀಡಲು ಚಿಂತನೆ ನಡೆದಿದೆ.
ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ಅಸಮಾಧಾನ ಈ ಕ್ಷಣದವರೆಗೂ ಶಮನಗೊಂಡಿಲ್ಲ. ಪಕ್ಷದ ಸಂಘಟನೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಅಶೋಕ್ ಅವರನ್ನು ಬದಲಾಯಿಸಲು ಪಕ್ಷದಲ್ಲಿ ಸಮಾಲೋಚಿಸಲಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋಪಾಲಯ್ಯ ಅವರನ್ನು ಮಂಡ್ಯ ಜಿಲ್ಲೆಗೆ ನಿಯೋಜಿಸಿ ಅಶೋಕ್ ಅವರಿಗೆ ಬೇರೊಂದು ಜವಾಬ್ದಾರಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್
ಉಸ್ತುವಾರಿ ಸಚಿವರಾಗಿ ಈಗಾಗಲೇ ಎರಡು ವಾರ ಕಳೆದಿದ್ದರೂ ಅಶೋಕ್ ಅವರು ಜಿಲ್ಲೆಯ ಯಾವುದೇ ನಾಯಕರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ. ಪ್ರಾರಂಭದಲ್ಲೇ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅಸಮಾಧಾನ ಶಮನ ಮಾಡಬಹುದಿತ್ತು ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ.
ಜಿಲ್ಲೆಯ ಬಹುತೇಕ ನಾಯಕರು ಗೋಪಾಲಯ್ಯ ಅವರನ್ನೇ ಮುಂದುವರೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ಪ್ರಮುಖ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದೊಳಗೆ ಹೊತ್ತಿಕೊಂಡಿರುವ ಅಸಮಾಧಾನವನ್ನು ಆದಷ್ಟು ಶೀಘ್ರವೇ ಶಮನ ಮಾಡಲೇಬೇಕೆಂದು ಮುಂದಾಗಿರುವ ವರಿಷ್ಠರು ಅಶೋಕ್ ಬದಲಿಸಿ ಗೋಪಾಲಯ್ಯ ಅವರನ್ನೇ ಮುಂದುವರೆಸಲು ಗಂಭೀರ ಚಿಂತನೆ ನಡೆಸಿದ್ದಾರೆ.
ಗೋಪಾಲಯ್ಯ ಅವರ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ವಿರೋಧ, ಅಪಸ್ವರಗಳು ಕೇಳಿಬಂದಿಲ್ಲ. ಸಚಿವ ನಾರಾಯಣಗೌಡ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಭುಜದ ಮೇಲೆ ಪತ್ನಿ ಶವ ಹೊತ್ತು ಸಾಗಿದ ಪತಿ
ಏಕಾಏಕಿ ಉಸ್ತುವಾರಿಯಿಂದ ಬದಲಾವಣೆ ಮಾಡಿದ್ದಕ್ಕೆ ಜಿಲ್ಲಾ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಮಂಡ್ಯ ಜಿಲ್ಲೆಯಲ್ಲಿ ಕನಿಷ್ಟ 2ರಿಂದ 3 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಗುರಿ ಹಾಕಿಕೊಳ್ಳಲಾಗಿದೆ.
ಆದರೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಗೋಪಾಲಯ್ಯ ಅವರನ್ನು ಬದಲಾಯಿಸಿದ್ದು ಏಕೆ ಎಂದು ಜಿಲ್ಲೆಯ ಮುಖಂಡರೇ ಪ್ರಶ್ನೆ ಮಾಡುತ್ತಿದ್ದಾರೆ.
ಅಶೋಕ್ ಅವರನ್ನು ಬದಲಾಯಿಸಿ ಗೋಪಾಲಯ್ಯ ಅವರನ್ನು ಮುಂದುವರೆಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಆರಂಭವಾಗಿತ್ತು. ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡಿರುವ ಪಕ್ಷದ ಮುಖಂಡರು ಸದ್ಯದಲ್ಲೇ ಈ ಗೊಂದಲಕ್ಕೆ ಬ್ರೇಕ್ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Mandya, District, In-charge, Minister, Gopalaiah,