ಚುನಾವಣಾ ಸಮರಕ್ಕೆ ಮೊಳಗಿದ ಕಮಲ ಕಹಳೆ

Social Share

ಬೆಂಗಳೂರು, ಮಾ.15- ಮಾರ್ಚ್1ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದೆ. ಇದು ಚುನಾವಣಾ ಸಮರದ ಸಮಯ. ನಾವೆಲ್ಲರೂ ದಣಿವರಿಯದೆ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ದಿ ಕ್ಯಾಪಿಟಲ್ ಹೋಟೆಲ್ನಲ್ಲಿಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ರಾಜ್ಯವು ಅತಿ ಹೆಚ್ಚು ಜಿಎಸ್ಟಿ ಸಂಗ್ರಹಿಸುತ್ತಿದ್ದು, ಗುರಿ ಮೀರಿ ಶೇ.23ರಷ್ಟು ಹೆಚ್ಚು ಕಂದಾಯ ಸಂಗ್ರಹವಾಗಿದೆ. ಬಡವರ ಪರವಾಗಿ ನಮ್ಮ ನಿಲುವಿದೆ ಎಂದು ವಿವರಿಸಿದರು. ಕಮಲ ಅರಳಿಸಿ, ಅಧಿಕಾರ ಗಳಿಸುವ ಸಂಕಲ್ಪ ನಮ್ಮದಾಗಬೇಕು ಎಂದು ತಿಳಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಹಣ ಅನುದಾನ ಕೊಟ್ಟಿದ್ದೇವೆ. ಸ್ಪಂದನಾಶೀಲ, ಜನಪರ ಬಿಜೆಪಿ ಸರಕಾರ ರಾಜ್ಯದಲ್ಲಿದೆ ಎಂದು ವಿವರಿಸಿದರು. ಕ್ಷೇತ್ರದಲ್ಲಿ ಫಲಾನುಭವಿಗಳ ಸಮ್ಮೇಳನ ನಡೆಸಲು ತಿಳಿಸಿದರು.

ಮಂಡಲ ಪ್ರಭಾರಿಗಳ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಕೇಂದ್ರದ ನರೇಂದ್ರ ಮೋದೀಜಿ ಸರ್ಕಾರ ಹತ್ತು-ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಕರ್ನಾಟಕದಲ್ಲಿ 2019ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ನಾನು ಪ್ರವಾಹವನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅಲ್ಲದೆ ನಮ್ಮ ರಾಜ್ಯ ಸರ್ಕಾರ ಅನೇಕ ಜನೋಪಯೋಗಿ ಕಾರ್ಯಕ್ರಮ ಜಾರಿಗೊಳಿಸಿದೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕಿದೆ ಎಂದರು.

ನಕಾರಾತ್ಮಕವಾಗಿ ಮತ ಪಡೆಯಲು ಕಾಂಗ್ರೆಸ್- ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ನಾವು ಧನಾತ್ಮಕ ರೀತಿಯಲ್ಲಿ ಜನಮತ ಪಡೆಯಲು ಮುಂದಾಗುತ್ತೇವೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟು ಪಕ್ಷಕ್ಕೆ ಗೆಲುವು ತಂದು ಕೊಡಬೇಕಿದೆ ಎಂದು ತಿಳಿಸಿದರು.

ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷವು ಇನ್ನೊಬ್ಬರ ಅವಹೇಳನ ಮಾಡಿ ಮತ ಪಡೆಯಲು ಮುಂದಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಕೇಂದ್ರದ ಅನುದಾನ ಬಳಸಿ ಪಡಿತರ ಅಕ್ಕಿ ಕೊಟ್ಟರೂ ಅನ್ನ ಭಾಗ್ಯ ತಾವೇ ಕೊಟ್ಟಿದ್ದಾಗಿ ಬಿಂಬಿಸಿದ್ದರು ಎಂದು ಟೀಕಿಸಿದರು.

ಜನರ ಕಣ್ಣಲ್ಲಿ ಮಣ್ಣೆರಚುವ ಕಾರ್ಯವನ್ನು ಸದಾ ಕಾಲ ಕಾಂಗ್ರೆಸ್ ಮಾಡಿತ್ತು. ಅವರ ಅವಯಲ್ಲಿ ರಾಜ್ಯವು ಎಲ್ಲ ರಂಗಗಳಲ್ಲಿ ಹಿಂದುಳಿದಿತ್ತು. ಅವರ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿತ್ತು ಎಂದು ದೂರಿದರು. ಅಕ್ಕಿ, ಎಸ್ಸಿ-ಎಸ್ಟಿ ಹಾಸ್ಟೆಲ್ನಲ್ಲೂ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ನೀರಾವರಿ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಬಿಡಿಎದಲ್ಲಿ ರೀಡೂ ಭ್ರಷ್ಟಾಚಾರ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿಬಿಟ್ಟರು. ಎಸಿಬಿ ಮುಂದೆ ಸಿದ್ದರಾಮಯ್ಯರದೂ ಸೇರಿದಂತೆ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟಿದ್ದರು. ಕಾಂಗ್ರೆಸ್ ತಮ್ಮ ಮೇಲಿನ ಆರೋಪಗಳಿಗೆ ಮೊದಲು ಉತ್ತರಿಸಬೇಕು. ಬಣ್ಣ ಬಯಲಾಗುವ ಭೀತಿ ಕಾಂಗ್ರೆಸ್ಸಿಗರದು. ಆರೋಪಗಳ ಮೇಲೆ ಕೌದಿ ಹಾಕಿ ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯರದು ಎಂದು ಟೀಕಿಸಿದರು.

ನಮ್ಮ ಮೇಲಿನ ಆರೋಪದ ದಾಖಲೆ ಕೊಟ್ಟರೆ ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸವಾಲು ಹಾಕಿದರು. ನೀರಾವರಿ ನಿಗಮದಲ್ಲಿ ಎರಡು ಸಮಿತಿ ಇತ್ತು. ಇವೆರಡನ್ನೂ ಮುಚ್ಚಿ ಹಾಕಿದವರು ಕಾಂಗ್ರೆಸ್ಸಿಗರು. ಆ ಮೂಲಕ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದರು ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ವೈಫಲ್ಯ, ಬಿಜೆಪಿಯ ಮನೆಮನೆಗೆ ನಲ್ಲಿನೀರು ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮನೆ, ಕರೆಂಟ್, ಶೌಚಾಲಯ, ಉಚಿತ ಪಡಿತರ- ಹೀಗೆ ಕುಟುಂಬಗಳ ಸಶಕ್ತೀಕರಣ ನಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಕ್ಕಳಿಗೆ ಸೈಕಲï, ವಿದ್ಯಾನಿಯಂಥ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ದುಡಿಯುವ ವರ್ಗಕ್ಕೆ ಬಲ ತುಂಬಲು ಕಾಯಕ ಯೋಜನೆ ಜಾರಿಗೊಳಿಸಿದ್ದೇವೆ. ಇಂಥ ಫಲಾನುಭವಿಗಳನ್ನು ಭೇಟಿ ಮಾಡಿ ನಮ್ಮ ಅಭಿಮಾನಿಗಳನ್ನು ಹೆಚ್ಚಿಸಿ. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳವನ್ನೂ ಜನರಿಗೆ ತಿಳಿಸಬೇಕು ಎಂದು ವಿನಂತಿಸಿದರು. ಲಂಬಾಣಿ ತಾಂಡಾದ ಜನರಿಗೆ ನ್ಯಾಯ ಕೊಟ್ಟದ್ದನ್ನು ತಿಳಿಸಿಕೊಡಿ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ಪ್ರಮುಖರು ಭಾಗವಹಿಸಿದ್ದರು.

#BJP, #Meeting,

Articles You Might Like

Share This Article