ಕನಕಪುರ,ಜ.11- ಜನಜಂಗುಳಿ ಹಾಗೂ ಜನಸಾಗರದ ನಡುವೆ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಪಿಕ್ಪಾಕೆಟ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಿನ್ನೆಯ ಪಾದಯಾತ್ರೆ ಸಾಗುತ್ತಿದ್ದ ಮಾರ್ಗದ ಮರಳೇಬೇಕುಪ್ಪೆ ಗ್ರಾಮದಲ್ಲಿ ಯುವಕನೊಬ್ಬನ 20 ಸಾವಿರ ಹಣ ಕದ್ದಿದ್ದು, ಆತನ್ನು ಹಿಡಿದು ಧರ್ಮದೇಟು ನೀಡಿ ಸಾತನೂರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಪಿಕ್ಪಾಕೆಟ್ ದಂಧೆಯಲ್ಲಿ ತೊಡಗಿದ್ದ ಮೂರ್ನಾಲ್ಕು ಮಂದಿಯಲ್ಲಿ ಬಿ.ಮಂಜ (30) ಎಂಬಾತ ಸಿಕ್ಕಿ ಬಿದಿದ್ದಾನೆ. ಹಣ ಕದಿಯುತ್ತಿದ್ದ ವೇಳೆ ಸ್ಥಳದಲ್ಲಿಯೇ ಆತನಿಗೆ ಗೂಸಕೊಟ್ಟ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಸ್ಪತ್ರೆಯಿಂದ ಪರಾರಿ: ಪಿಕ್ಪಾಕೆಟ್ ಮಾಡಿ ಗೂಸ ತಿಂದು ಕನಕಪುರ ನಗರದ ಸರ್ಕಾರಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದ ಕಳ್ಳ ಮಂಜ ಆಸ್ಪತ್ರೆಯಿಂದ ಸಂಜೆ 5.20ರಲ್ಲಿ ಕಾಂಪೌಡ್ ಹಾರಿ ಪರಾರಿಯಾಗಿದ್ದಾನೆ. ಕಳೆದ ಎರಡು ದಿನಗಳಿಂದ ಮೇಕೆದಾಟು ಪಾದಯಾತ್ರೆ ಆರಂಭದಿಂದಲೂ ಅಲ್ಲಲ್ಲಿ ದುಡ್ಡು ಕಳೆದುಕೊಳ್ಳುತ್ತಿದ್ದವರ ಸಂಖ್ಯೆ ಹೆಚ್ಚಾಗಿತ್ತು.
ಈ ಜನಸಾಗರದಲ್ಲಿ ಪಿಕ್ಪಾಕೆಟ್ ದಂಧೆಕೋರನಿಗೆ ಗೂಸಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರೂ ಕಳ್ಳನನ್ನು ಹಿಡಿದು ಕ್ರಮಕೈಗೊಳ್ಳಲಾಗದ ಪೊಲೀಸರು ಹಿಡಿದುಕೊಟ್ಟ ಕಳ್ಳನನ್ನು ಕಾಯಲಾಗದ ಪೊಲೀಸರಿಂದ ಮತ್ತೇನು ರಕ್ಷಣೆ ಸಿಕ್ಕೀತು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
