ಬೆಂಗಳೂರು, ಮಾ.4- ರಾಜ್ಯದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಹಾಲು ಉತ್ಪಾದಕರಿಗೆ ಸರಳ ನಿಬಂಧನೆಗಳೊಂದಿಗೆ ಸಾಲ ನೀಡಲು ಹಾಲು ಉತ್ಪಾದಕರ ಸಹಕಾರ ಸಂಘ ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳು 260 ಕೋಟಿ ರೂ. ಮತ್ತು ರಾಜ್ಯಸರ್ಕಾರ 100 ಕೋಟಿ ರೂ. ಷೇರು ಬಂಡವಾಳವನ್ನು ಬ್ಯಾಂಕಿಗೆ ಒದಗಿಸುವ ಪ್ರಸ್ತಾಪವನ್ನು ಇಂದು ಮುಖ್ಯಮಂತ್ರಿ ಮಂಡಿಸಿ ಆಯವ್ಯಯದಲ್ಲಿ ಘೋಷಿಸಲಾಗಿದೆ.
(KARNATAKA BUDGET 2022-ಕರ್ನಾಟಕ ಬಜೆಟ್ 2022 (Live Updates)
ಪಶು ಚಿಕಿತ್ಸಾಲಯಗಳನ್ನು ಬಲಪಡಿಸುವುದರ ಜೊತೆಗೆ ಹೊಸದಾಗಿ 100 ಪಶು ಚಿಕಿತ್ಸಾಲಯಗಳನ್ನು ಹಂತಹಂತವಾಗಿ ಪ್ರಾರಂಭಿಸಲಾಗುತ್ತದೆ. ಖಾಲಿ ಇರುವ 400 ಪಶು ವೈದ್ಯಾಕಾರಿಗಳ ಹುದ್ದೆ ಭರ್ತಿಗೆ ಕೈಗೊಳ್ಳುವ ಭರವಸೆ ನೀಡಲಾಗಿದೆ.
ರಾಜ್ಯದಲ್ಲಿರುವ ಗೋ ಶಾಲೆಗಳ ಸಂಖ್ಯೆಯನ್ನು 31 ರಿಂದ 100ಕ್ಕೆ ಹೆಚ್ಚಿಸಲು 50 ಕೋಟಿ ರೂ. ಒದಗಿಸಲಾಗಿದೆ. ಗೋವುಗಳನ್ನು ದತ್ತು ತೆಗೆದುಗೊಳ್ಳುವುದನ್ನು ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭಿಸಲಿದೆ,
ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 50 ರೂ.ಗೆ ಹೆಚ್ಚಿಸಲಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಪಾರದರ್ಶಕ ಮತ್ತು ನ್ಯಾಯಯುತ ಬೆಲೆ ಒದಗಿಸಲು ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ-ವೆಯಮೆಂಟ್ ಮತ್ತು ಇ-ಪೇಮೆಂಟ್ ಅನುಷ್ಠಾನಗೊಳಿಸಲಾಗುವುದು.
ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಲಾಗಿದೆ.
