ಬೆಂಗಳೂರು,ಜ.6- ಬಿಜೆಪಿಗೆ ನನ್ನಿಂದಾಗಿ ಒಂದು ವೋಟು ಬರುವುದಿಲ್ಲ ಎಂದಾದರೆ ನನ್ನನ್ನು ಪಕ್ಷದಿಂದ ಕಿತ್ತು ಹಾಕಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಸಂಸದ ಜಿ.ಎಸ್. ಬಸವರಾಜು ಮತ್ತು ಸಚಿವ ಬೈರತಿ ಬಸವರಾಜು ಅವರ ನಡುವೆ ನಡೆದ ಗುಸುಗುಸು ಮಾತುಕತೆಯಲ್ಲಿ ಮಾಧುಸ್ವಾಮಿ ವಿರುದ್ಧ ಆಕ್ರೋಶಗಳು ಕೇಳಿ ಬಂದಿದ್ದವು.
ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ಸಂಸದ ಬಸವರಾಜು ನನ್ನ ಬಗ್ಗೆ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಸಮಯಕ್ಕೆ ಸರಿಯಾಗಿ ಸಂಪುಟಕ್ಕೆ ಬರುವುದಷ್ಟೇ ನನಗೆ ಗೊತ್ತು ಎಂದು ಹೇಳಿದರು. ನನ್ನಿಂದ ಒಂದು ವೋಟು ಬರುವುದಿಲ್ಲ ಎಂದಾರೆ ಸರಿ. ನನ್ನನು ಪಕ್ಷದಿಂದ ಕಿತ್ತು ಹಾಕಿ.
ಅವರೇ ಇದ್ದುಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಇದೇ ವಿಷಯಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಬಸವರಾಜು, ಸಂಸದರು ಏನೋ ಮಾತನಾಡಲು ಹೋಗಿ ಮತ್ತೇನನ್ನೋ ಹೇಳಿದ್ದಾರೆ. ಇದರಲ್ಲಿ ಚರ್ಚೆ ಮಾಡುವಂತದ್ದು ಏನೂ ಇಲ್ಲ ಎಂದು ಜಾರಿಕೊಂಡರು.
