ಬೆಂಗಳೂರು,ಜ.28- ನಾನು ಯಾವುದೇ ಪೊಲೀಸರ ಮೇಲೆ ಹಲ್ಲೆ ನಡೆಸುವುದಾಗಲಿ ಅಥವಾ ಅವರನ್ನು ಅವಾಚ್ಯಶಬ್ಧಗಳಿಂದ ನಿಂದಿಸಿಲ್ಲ. ಇವೆಲ್ಲವೂ ಕಟ್ಟುಕತೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕಳೆದ ರಾತ್ರಿ ಶಾಸಕರ ಭವನದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿಲ್ಲ. ಅದಲ್ಲೆ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದ ಕೆಲವರು ಇಂತಹ ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದರು.
ಪ್ರಾಯಶಃ ಪೊಲೀಸರಿಗೆ ನಾನು ಶಾಸಕ ಎಂಬುದು ಗೊತ್ತಿರಲಿಲ್ಲವೇನೋ. ಹಾಗಾಗಿ ಅವರು ಪಾರ್ಕಿಂಗ್ ವಿಷಯದಲ್ಲಿ ನನ್ನ ಬಳಿ ತಗಾದೆ ತೆಗೆಯಲು ಮುಂದಾದರು. ಕೆಲವು ದಾಖಲೆಗಳನ್ನು ಕೇಳಿದರು. ನಾನು ಮೂಡಿಗೆರೆ ಶಾಸಕ ಎಂದು ಅವರಿಗೆ ಮನವರಿಕೆ ಮಾಡಿದೇ ಹೊರತು ಅವರ ಬಳಿ ಅನಗತ್ಯವಾಗಿ ತಗಾದೆ ತೆಗೆಯಲಿಲ್ಲ ಎಂದರು.
ಹೊಯ್ಸಳದವರು ಸುಮ್ಮನೆ ನನ್ನ ಬಳಿಯೇ ಕಿರಿಕ್ ಮಾಡಲು ಮುಂದಾದರು. ನಾನೊಬ್ಬ ಜನಪ್ರತಿನಿ. ಹೇಗೆ ವರ್ತಿಸಬೇಕೆಂಬುದು ಗೊತ್ತಿದೆ. ಪಾರ್ಕಿಂಗ್ ವಿಷಯವನ್ನು ದೊಡ್ಡ ರಾದ್ಧಾಂತ ಮಾಡಬಾರದು ಎಂದು ಅವರಿಗೆ ಮನವರಿಕೆ ಮಾಡಿದ್ದೇನೆ ಹೊರತು ಈಗ ಕೇಳಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಅವರು ಹೇಳಿದರು.
