ಬೆಂಗಳೂರು, ಫೆ.16- ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷಾತೀತವಾಗಿ ಮುತ್ತಿಕೊಂಡ ಸದಸ್ಯರು ತಮ್ಮಗೆ ಬೇಕಾದ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದು ಕಂಡು ಬಂತು.
ಕಲಾಪ ಶುರುವಾಗಿ ಐದು ದಿನಗಳಾಗಿದ್ದರೂ ಮುಖ್ಯಮಂತ್ರಿಯವರು ಮೇಲ್ಮನೆಗೆ ಆಗಮಿಸಿರಲಿಲ್ಲ. ವಿಧಾನಸಭೆ ಕಲಾಪ ಮತ್ತು ಬಜೆಟ್ ಸಿದ್ಧಗೊಳಿಸುವುದರಲ್ಲಿ ನಿರತರಾಗಿದ್ದರು. ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಮುನ್ನಾ ದಿನವಾದ ಇಂದು ವಿಧಾನ ಪರಿಷತ್ಗೆ ಆಗಮಿಸಿ ಪ್ರಶ್ನೋತ್ತರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಮುಖ್ಯಮಂತ್ರಿ ಪಾಲಿನ ಪ್ರಶ್ನೆಗಳು ಮುಗಿಯುತ್ತಿಸದ್ದಂತೆ ಹಲವು ಸದಸ್ಯರು ಕಾಗದ ಪತ್ರಗಳನ್ನು ಹಿಡಿದು ಅವರ ಬಳಿ ತೆರಳಿದರು. ಎಲ್ಲರೊಂದಿಗೂ ನಗುತ್ತಾ, ತಾಳ್ಮೆಯಿಂದ ಮಾತನಾಡಿದ ಮುಖ್ಯಮಂತ್ರಿ, ಕಾಗದ ಪತ್ರಗಳನ್ನು ಪರಿಶೀಲಿಸಿ ಸಹಿ ಮಾಡಿಕೊಡುತ್ತಿದ್ದರು.
ವಿಧಾನಸಭೆಯ ಕೊನೆಯ ಅವೇಶನ ಆಗಿರುವ ಕಾರಣಕ್ಕೆ ಅವರ ಆಪ್ತರು ಹಾಗೂ ಪರಿಚಯಸ್ಥ ಸದಸ್ಯರು ಕಾಗದ ಪತ್ರಗಳಿಗೆ ಸಹಿ ಪಡೆಯುತ್ತಿದ್ದು ವಿಶೇಷವಾಗಿತ್ತು.
#MLAs, #Rush, #CMBommai,