ಹಿಜಾಬ್ ವಿವಾದ : ಮೂಗು ತೂರಿಸಿದ ‘ಪಾಪಿ’ಸ್ತಾನಕ್ಕೆ ಭಾರತ ತಿರುಗೇಟು

Social Share

ನವದೆಹಲಿ, ಫೆ.12- ಕರ್ನಾಟಕದಲ್ಲಿ ಶುರುವಾಗಿ ದೇಶವನ್ನು ವ್ಯಾಪಿಸಿರುವ ಹಿಜಾಬ್ ಗದ್ದಲಕ್ಕೆ ಸಂಬಂಧ ಪಟ್ಟಂತೆ ಅನ್ಯ ದೇಶಗಳ ಅಭಿಪ್ರಾಯಗಳನ್ನು ತಳ್ಳಿ ಹಾಕಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಅನ್ಯರ ಪ್ರಚೋದನಕಾರಿ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ ಎಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಭಾರತವನ್ನು ಚೆನ್ನಾಗಿ ತಿಳಿದಿರುವವರು ವಾಸ್ತವತೆ ಮೇಲೆ ಸರಿಯಾಗಿ ಮಾತನಾಡುತ್ತಾರೆ ಎಂದಿದ್ದಾರೆ.
ಕರ್ನಾಟಕ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ವಿಷಯವು ಕರ್ನಾಟಕ ಹೈಕೋರ್ಟ್‍ನ ವಿಚಾರಣೆಯಲ್ಲಿದೆ. ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳಲ್ಲಿ ಪ್ರಜಾಸತ್ತಾತ್ಮಕ ನೀತಿಗಳು ಹಾಗೂ ರಾಜಕೀಯವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.
ಅಮೆರಿಕಾದ ರಾಯಬಾರಿ ರಶಾದ್ ಹುಸೇನ್ ಅವರು, ಶಾಲೆಗಳಲ್ಲಿ ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು. ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮಥ್ರ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ.
ಮಹಿಳೆಯರು, ಹುಡುಗಿಯರನ್ನು ಕಳಂಕಗೊಳಿಸುವ ಹಾಗೂ ಕಡೆಗಣಿಸುವ ಪ್ರಯತ್ನವಾಗಿದೆ ಎಂದು ಟ್ವೀಟ್ ಮಾಡಿದ್ದರು.
ಪಾಕಿಸ್ತಾನ ರಾಜತಾಂತ್ರಿಕ ಕಚೇರಿ ಭಾರತದ ರಾಜಭಾರಿಯನ್ನು ಕರೆಸಿಕೊಂಡು ತನ್ನ ಕಳವಳವನ್ನು ವ್ಯಕ್ತ ಪಡಿಸಿದ್ದಲ್ಲದೆ, ಹಿಜಾಬ್ ಧಾರಣೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಬಗ್ಗೆ ಅಸಮಧಾನ ತೋರಿಸಿತ್ತು. ಭಾರತದಲ್ಲಿನ ಮುಸ್ಲಿಮರ ವಿರುದ್ಧ ಧಾರ್ಮಿಕ ಅಸಹಿಷ್ಣುತೆ ಮತ್ತು ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಪಾಕ್ ಪ್ರಚೋದನಕಾರಿ ಹೇಳಿಕೆ ನೀಡಿತ್ತು.

Articles You Might Like

Share This Article