ಕಲಬುರಗಿ, ಜ.13- ಕೃಷಿ ಸಚಿವರ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರ ಜತೆ ಪ್ರಯಾಣಿಸುತ್ತಿದ್ದ ಸಂಸದ ಉಮೇಶ್ ಜಾದವ್ ಅವರ ಎಡಗೈ ಮೂಳೆಗೆ ಪೆಟ್ಟಾಗಿದೆ. ಕಲಬುರಗಿಯ ರಾಮಮಂದಿರ ಸರ್ಕಲ್ ಬಳಿ ಈ ಘಟನೆ ಸಂಭವಿಸಿದ್ದು, ಸಂಸದರ ಎಡಗೈ ಮೂಳೆಗೆ ಪೆಟ್ಟು ಬಿದ್ದಿದ್ದು, ಅಪಾಯದಿಂದ ಅವರು ಪಾರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಕಲಬುರಗಿ ಸಂಸದರಾದ ಡಾ.ಉಮೇಶ್ ಜಾದವ್ ಅವರು ಕೃಷಿ ಸಚಿವರೊಂದಿಗೆ ಪ್ರಯಾಣಿಸುತ್ತಿದ್ದಾಗ ಸಚಿವರ ಕಾರು ಬೆಂಗಾವಲು ಪಡೆ ವಾಹನಕ್ಕೆ ಗುದ್ದಿದ್ದರಿಂದ ಸಂಸದರು ಗಾಯಗೊಂಡಿದ್ದಾರೆ ಎಂದು ತಿಳಿದು ನೋವಾಗಿದೆ.
ಅವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಟ್ವಿಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬೀದರ್ ಸಂಸದ ಭಗವಾನ್ ಖೂಬಾ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಜಾದವ್ ಅವರಿಗೆ ಅಪಘಾತವಾಗಿರುವುದನ್ನು ಕೇಳಿ ನನಗೆ ತೀವ್ರ ಆಘಾತವಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
