ನಿರ್ದೇಶಕರು ಆಕ್ಷನ್ ಎಂದರೆ ನಾಯಕ ಪ್ಯಾಕಪ್ ಎಂದು ಹೇಳ್ತಾನೆ. ಶೂಟಿಂಗ್ ಶುರು ಅಂದ್ರೆ ತಿಂಡಿ ಊಟ ಮಾಡೋಣ ಅಂತಾನೆ. ಹೆಚ್ಚಿಗೆ ಮಾತನಾಡಿದ್ರೆ ಅವರನ್ನೇ ಬದಲಾಯಿಸಿ ಅಂತಾನೆ. ಒಟ್ಟಾರೆ ನಿರ್ದೇಶಕ ನಿರ್ಮಾಪಕರಿಗೆ ದುಬಾರಿ ನಟ. ಅಷ್ಟೇ ಅಲ್ಲ ತಿಕ್ಕಲು ಆ ಸ್ವಾಮಿ. ಈ ಅಂಶಗಳ ಮೇಲೆ ಶುರುವಾಗುತ್ತೆ ಪ್ರಥಮ್ ನಿರ್ದೇಶನ ಮಾಡಿ ನಟಿಸಿರುವ ನಟಭಯಂಕರ ಚಿತ್ರ.
ಈ ವಾರ ತೆರೆಕಂಡು ರಾಜ್ಯದ್ಯಂತ ಪ್ರೇಕ್ಷಕರನ್ನ ಸೆಳೆದಿರುವ ನಟಭಯಂಕರ ಚಿತ್ರದ ಕಥೆ, ಪ್ರಥಮ್ ನಿಜ ಜೀವನದ ಒಂದಿಷ್ಟು ಸ್ವಭಾವಗಳಿಗೆ ಹಿಡಿದ ಕೈಗನ್ಮಡಿ ಅಂದರೆ ತಪ್ಪಾಗಲಾರದು. ತನ್ನನ್ನು ತಾನೇ ವಿಮರ್ಷಿಸಿಕೊಂಡು ಪರದೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಮೊದಲಾರ್ಧದಲ್ಲಿ ಸಿನಿಮಾದಲ್ಲಿ ಸಿನಿಮಾ ತೋರಿಸುವ ಪ್ರಯತ್ನವನ್ನು ಪ್ರಥಮ್ ಮಾಡಿದ್ದಾರೆ.
ನಿರ್ದೇಶಕರಾಗಿ ಓಂ ಪ್ರಕಾಶ್ ರಾವ್ ಅಭಿನಯಿಸಿದ್ದು ನಾಯಕನಿಗೂ ಇವರಿಗೂ ನಡೆಯುವ ಸಖತ್ ಜುಗಲ್ಬಂದಿ ಸನ್ನಿವೇಶಗಳು ಹಾಸ್ಯಮಯವಾಗಿ ಸಾಗಿವೆ. ಸಿನಿಮಾ ರಂಗದಲ್ಲಿ ಕೆಲ ನಟರು ಹೇಗೆ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ತೊಂದರೆ ಕೊಡುತ್ತಾರೆ ಎಂಬುದನ್ನು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಮತ್ತಷ್ಟು ನೆರವಾಗಿರುವುದು ನಟ ಕುರಿ ಪ್ರತಾಪ್. ಸಿನಿಮಾದುದ್ದಕ್ಕೂ ಪ್ರಥಮ್ ಜೊತೆ ಹಾಸ್ಯ ಸನ್ನಿವೇಶಗಳಲ್ಲಿ ಪರದೆ ಹಂಚಿಕೊಂಡಿದ್ದಾರೆ.
ಕಾಮಿಡಿಯಲ್ಲಿ ಸಾಗುತ್ತಿರುವ ಕಥೆಯಲ್ಲಿ ಹಾರರ್, ಸಸ್ಪೆನ್ಸ್ ಎದುರಾಗುತ್ತದೆ. ಪ್ರತಿಕಾರಕ್ಕಾಗಿ ಕಾದು ಕೂತಿರುವ ಕುರುಡು ಹೆಣ್ಣುದೆವ್ವದ ಬಂಗಲೆಗೆ ಕಥಾನಾಯಕ ಮತ್ತು ಅವನ ಸಿನಿಮಾ ತಂಡ ಎಂಟ್ರಿ ಕೊಡುತ್ತದೆ.ಅಲ್ಲಿ ತಂಡ ಯಾವ ಕಾರಣಕ್ಕೆ ಹೋಗುತ್ತೆ,ಹೋದಮೇಲೆ ಅಲ್ಲಿ ಏನೆಲ್ಲ ಅವಾಂತರಗಳು ಎದುರಾಗುತ್ತವೆ, ದೆವ್ವ ಯಾರಮೇಲೆ ದ್ವೇಶದ ಪ್ರತಿಕಾರಕ್ಕಾಗಿ ಕಾಯಿತ್ತಿರುತ್ತದೆ ಎಂಬ ಪ್ರಶ್ನಗಳು ಎದುರಾಗುತ್ತವೆ.ಇವುಗಳಿಗೆ ಉತ್ತರ ಚಿತ್ರ ನೋಡಿದಾಗ ಗೊತ್ತಾಗುತ್ತದೆ.
ಪ್ರಥಮ್ ಮೊದಲ ನಿರ್ದೇಶನವಾದರೂ ಪ್ರೇಕ್ಷಕ ಎರಡುವರೆ ಗಂಟೆ ಥಿಯೇಟರ್ ನಲ್ಲಿ ಕೋತು ಸಿನಿಮಾ ನೋಡುವಷ್ಟರ ಮಟ್ಟಿಗೆ ಪ್ರೌಢಿಮೆಯನ್ನ ಮೆರೆದಿದ್ದಾರೆ. ಪ್ರೀತಿಗೆ ಅಷ್ಟೇನೂ ಪ್ರಾಮುಖ್ಯತೆ ಕೊಡದ ಇವರು, ನಾನು ಆಕ್ಷನ್ ಮಾಡಿದರೆ ಚೆನ್ನಾಗಿರುವುದಿಲ್ಲ ಎಂದು ಹೇಳುತ್ತಾ ಒಂದಿಷ್ಟು ಫೈಟ್ ಮಾಡಿ ಮಾಡಿಸಿದ್ದಾರೆ.
ಸಾಯಿಕುಮಾರ್ ಅಗ್ನಿ ಎಂ ಬಿ ಬಿ ಎಸ್ ಆಗಿ ಡೈಲಾಗ್ಗಳ ಸುರಿಮಳೆಯನ್ನು ಸುರಿಸಿದ್ದಾರೆ. ಸಿನಿಮಾದಲ್ಲಿ ನಿಮಾಪಕನ ಪಾತ್ರದಲ್ಲಿ ಬಿರಾದರ್,ಸ್ವಮೀಜಯಾಗ ಶೋಭರಾಜ್,ಶಂಕರ್ ಅಶ್ವತ್ಥ್ ನಮ್ಮ ಪಾತ್ರಗಳ ಮೂಲಕ ಕಥೆಗೆ ಪುಷ್ಠಿ ನೀಡಿದ್ದಾರೆ.
ಕಾಮಿಡಿ, ಹಾರರ್, ಸಸ್ಪೆನ್ಸ್ ಅನ್ನು ಪ್ರಧಾನವಾಗಿಟ್ಟುಕೊಂಡು ಹೇಳಿರುವ ನಟಭಯಂಕರ ಸ್ಕ್ರೀನ್ ಪ್ಲೇಯಲ್ಲಿ, ಪ್ರದ್ಯೋತ್ತಮ್ ಸಂಗೀತ, ಕಥೆಗೆ ಮೆರಗು ತಂದಿದೆ. ಗಾಂಧಿನಗರದಲ್ಲಿ ಒಬ್ಬ ನಟನಾಗಿ ಮತ್ತು ನಿರ್ದೇಶಕನಾಗಿ ಉಳಿಯುವ ಭರವಸೆಯನ್ನು ಪ್ರಥಮ್ ಈ ಚಿತ್ರದ ಮೂಲಕ ಕೊಟ್ಟಿದ್ದಾರೆ.
Nata Bhayankara, review, Olle Huduga, Pratham, film,