ಬೆಂಗಳೂರು, ಸೆ.23- ಉಗ್ರ ಚಟುವಟಿಕೆಗೆ ಬೆಂಬಲ ನೀಡುತ್ತಿದೆ ಎಂಬ ಶಂಕೆಯ ಮೇಲೆ ಪಿಎಫ್ಐ ಚಟುವಟಿಕೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಳೆದ ಮೂರು ತಿಂಗಳಿನಿಂದಲೇ ಮಾಹಿತಿ ಕಲೆ ಹಾಕುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕಡೆ ನಿನ್ನೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದ ಎನ್ಐಎ ಮತ್ತಿತರ ತನಿಖಾ ಸಂಸ್ಥೆಗಳು ಏಳು ಮಂದಿಯನ್ನು ಬಂ„ಸಿದ್ದು, ತನಿಖೆಯನ್ನು ಮುಂದುವರೆಸಿದೆ. ಪ್ರಸ್ತುತ ಈ ದಾಳಿಗೆ ರೂಪುರೇಷೆ ಸಿದ್ಧಪಡಿಸಲು ಹಲವು ದಿನಗಳ ಕಾರ್ಯಚರಣೆ ನಡೆದಿತ್ತು.
ಈ ಹಿಂದೆಯೇ ಈ ದಾಳಿ ನಡೆಯಬೇಕಿತ್ತು. ಆದರೆ ಪಿಎಪ್ಐ ಸಂಘಟನೆಯ ಸಮಾವೇಶ ಇದ್ದ ಕಾರಣ ಅದನ್ನು ಮುಂದೂಡಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ವ್ಯವಸ್ಥಿತವಾಗಿ ಯಾವುದೇ ಲೋಪ ಉಂಟಾಗದಂತೆ ದಿಡೀರ್ ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದು, ಇವರ ದೈನಂದಿನ ಚಟುವಟಿಕೆಗಳು, ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಲಾಗಿತ್ತು ಎಂದು ಮೂಲಗಳು ಖಚಿತಪಡಿಸಿವೆ.
ಹಲವು ಸಂದರ್ಭಗಳಲ್ಲಿ ಪರಿಸ್ಥಿತಿಯ ಲಾಭ ಪಡೆದು ಗಲಭೆ ಸೃಷ್ಟಿಸಲು ಪಿಎಪ್ಐ ವ್ಯಾಪಕ ತಂತ್ರಗಾರಿಕೆಗಳನ್ನು ನಡೆಸುತ್ತಿತ್ತು ಎಂಬುದನ್ನು ಆಗಾಗ ಸಾಬೀತಾಗುತ್ತಿತ್ತು. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಪಡೆದು ಕ್ಷಿಪ್ರ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪಿಎಪ್ಐ ನ ಹಲವು ಮುಖಂಡರು ಬೆಂಗಳೂರಿ ಬಂದಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರಿನಲ್ಲೆ ಏಳು ಕಡೆ ಕಾರ್ಯಚರಣೆ ನಡೆಸಲಾಗಿತ್ತು. ಲ್ಯಾಪ್ಟಾಪ್, ಪೆನ್ಡ್ರೈವ್ಗಳು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ವಿದೇಶದಿಂದ ಹಣ ಬಂದಿರುವುದು ಸೇರಿದಂತೆ ಹಲವು ಪ್ರಮುಖ ಸುಳಿವನ್ನು ಪತ್ತೆ ಹಚ್ಚಿ ಎನ್ಐಎ ತನಿಖೆ ಮುಂದುವರೆಸಿದೆ.