ಬೆಂಗಳೂರು,ಫೆ.26- ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹೋಟೆಲ್ಗಳಿಗೆ ಯಾವುದೇ ರೀತಿಯ ತೆರಿಗೆ ಹೆಚ್ಚಳ ಮಾಡಬಾರದೆಂದು ಹೋಟೆಲ್ ಮಾಲೀಕರ ಸಂಘ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಈ ಕುರಿತು ಇಂದು ಹೋಟೆಲ್ ಮಾಲೀಕರ ಅಧ್ಯಕ್ಷ ಚಂದ್ರಶೇಖರ್ ಅವರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್ ಅವರು, ಕಳೆದ ಎರಡು ವರ್ಷಗಳಿಂದಲ್ಲೂ ಹೋಟೆಲ್ ಉದ್ಯಮ ಸಂಕಷ್ಟದಲ್ಲಿವೆ. ಕೋವಿಡ್ನಿಂದ ಉದ್ಯಮ ನಷ್ಟದಲ್ಲಿರುವಂತಹ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚು ಮಾಡಿರುವುದು ಸರಿಯಲ್ಲ. ಇದನ್ನು ಕಡಿಮೆ ಮಾಡಿ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಟ್ರೇಡ್ ಲೈಸನ್ಸ್ ರಿನಿವಲ್ ಒನ್ ಟೈಮ್ ಆಗಬೇಕು. ಒಂದೇ ಬಾರಿ ಪರಾವನಗಿ ಕೊಡಬೇಕು. ಪ್ರತಿ ವರ್ಷ ರಿನಿವಲ್ ಮಾಡುವುದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಹೇಳಿದರು. ರಸ್ತೆಬದಿಯಲ್ಲಿ ಅನೇಕ ಹೊಟೇಲ್ಗಳಿವೆ. ಅವರಿಗೆ ಪುಟ್ ಪಾತ್ ವ್ಯವಸ್ಥೆ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲೂ ಈ ಉದ್ಯಮದವರಿಗೆ ಅನುಕೂಲ ಮಾಡಬೇಕು. ಈ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ನಮ್ಮ ಮನವಿಯನ್ನು ಆಲಿಸಿರುವ ಮುಖ್ಯಮಂತ್ರಿಗಳು ಎಲ್ಲವನ್ನೂ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಹೊಟೇಲ್ಗಳಲ್ಲಿ ಆಹಾರ ಪದಾರ್ಥಗಳ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದರ ಏರಿಕೆ ಕಾಮನ್ ಆಗಿದೆ. ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಹೋಟೆಲ್ ದರದಲ್ಲೂ ವ್ಯತ್ಯಾಸವಾಗುತ್ತದೆ. ರಸ್ತೆ ಬದಿಯಲ್ಲಿರುವ ಹೋಟೆಲ್ಗಳಲ್ಲಿ ನಮಗಿಂತ ದರ ಹೆಚ್ಚಾಗಿದೆ ಎಂದರು.
ಜನರು ಉತ್ತಮ ಆಹಾರ ಕೇಳುತ್ತಿದ್ದಾರೆ. ದರ ಹೆಚ್ಚಳದ ಬಗ್ಗೆ ಹೇಳಿಲ್ಲ. ಕೋವಿಡ್ನಿಂದ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಬೇಡಿ ಎಂದು ಮನವಿ ಮಾಡಿದ್ದೇವೆ ಎಂದು ಚಂದ್ರಶೇಖರ್ ತಿಳಿಸಿದರು.
