ಇಟ್ನಾಗರ(ಅರುಣಚಲಪ್ರದೇಶ),ಫೆ.20- 21ನೇ ಶತಮಾನದಲ್ಲಿ ಈಶಾನ್ಯ ಭಾರತವು ದೇಶದ ಬೆಳವಣಿಗೆಯ ಇಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅರುಣಾಚಲ ಪ್ರದೇಶದ ರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭಾಷಯ ಕೋರಿರುವ ಅವರು, 36ನೇ ರಾಜ್ಯ ಸಂಸ್ಥಾಪನಾ ದಿನದ ಶುಭಾಷಯಗಳು ರಾಜ್ಯದ ಸಹೋದರ, ಸಹೋದರಿಯ ಶ್ರಮದ ಫಲದಿಂದ ರಾಜ್ಯ ನಿರಂತರ ಸಬಲೀಕರಣಗೊಂಡಿದೆ ಎಂದರು.
ಅರುಣಾಚಲವನ್ನು ಪೂರ್ವ ಏಷ್ಯಾದ ಪ್ರಮುಖ ಹೆಬ್ಬಾಗಿಲು ಮಾಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ರಾಷ್ಟ್ರೀಯ ಭದ್ರತೆಗೆ ಸಂಬಂಸಿದಂತೆ ಅರುಣಾಚಲದ ಪಾತ್ರವನ್ನು ಪರಿಗಣಿಸಿ ಆಧುನಿಕ ಮೂಲಸೌಕರ್ಯ ಒದಗಿಸಲು ಮುಂದಾಗಿದ್ದೇವೆ. ಪ್ರಕೃತಿಯು ಅರುಣಾಚಲಕ್ಕೆ ತನ್ನ ಬಹಳಷ್ಟು ಸಂಪತ್ತನ್ನು ನೀಡಿದೆ. ಅರುಣಾಚಲದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಇಡೀ ಜಗತ್ತಿಗೆ ಕೊಂಡೊಯ್ಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಪೂರ್ವ ಭಾರತ ಮತ್ತು ವಿಶೇಷವಾಗಿ ಈಶಾನ್ಯ ಭಾರತವು 21ನೇ ಶತಮಾನದಲ್ಲಿ ದೇಶದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂಬುದು ನನ್ನ ಬಲವಾದ ನಂಬಿಕೆ. ಇದೇ ಸೂರ್ತಿಯಿಂದ ಕಳೆದ 7 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಅಭೂತಪೂರ್ವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಅರುಣಾಚಲ ಪ್ರದೇಶದಿಂದ ಹೊಸ ಎತ್ತರಕ್ಕೆ ಕೊಂಡೊಯ್ಯಲ್ಪಟ್ಟ ದೇಶಪ್ರೇಮ ಮತ್ತು ಸಾಮಾಜಿಕ ಸಾಮರಸ್ಯದ ಪ್ರಜ್ಞೆ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿದ ರೀತಿ, ನೀವು ಸಂಪ್ರದಾಯ ಮತ್ತು ಪ್ರಗತಿಯನ್ನು ಒಟ್ಟಿಗೆ ಮುನ್ನಡೆಸುತ್ತಿರುವ ರೀತಿ ರಾಷ್ಟ್ರಕ್ಕೆ ಸೂರ್ತಿಯಾಗಿದೆ ಎಂದರು.
ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಅರುಣಾಚಲ ಪ್ರದೇಶದ ಎಲ್ಲಾ ಹುತಾತ್ಮರನ್ನು ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಸ್ಮರಿಸಲಾಗುತ್ತದೆ. ಅದು ಆಂಗ್ಲೋ ಅಬೋರ್ ಯುದ್ಧವಾಗಿರಲಿ ಅಥವಾ ಸ್ವಾತಂತ್ರ್ಯದ ನಂತರ ಗಡಿ ಕಾಯುವಿಕೆಯಾಗಿರಲಿ, ಅರುಣಾಚಲ ಪ್ರದೇಶದ ಜನರ ಶೌರ್ಯ ಸಾಹಸವು ಪ್ರತಿಯೊಬ್ಬ ಭಾರತೀಯನಿಗೂ ಆದರ್ಶ ಪರಂಪರೆಯಾಗಿದೆ ಎಂದು ಹೇಳಿದರು.
