ಬೆಂಗಳೂರು,ಆ.7- ಶೋಕಿ ಹಾಗೂ ಮೋಜು-ಮಸ್ತಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಆರೋಪಿಯೊಬ್ಬನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 19 ಬೈಕ್ಗಳನ್ನು ವಶಪಡಿಸಿ ಕೊಂಡಿದ್ದಾರೆ. ಕೆ.ಆರ್.ಪುರದ ದೇವಸಂದ್ರ, ಜೆ.ಸಿ.ಲೇಔಟ್ನ 2ನೇ ಕ್ರಾಸ್ ನಿವಾಸಿ ಶೋಯಬ್ ಖಾನ್ ಅಲಿಯಾಸ್ ಹಾತ್ ತುಟ್ಟ ಅಲಿಯಾಸ್ ಟ್ಯಾಬ್ ಡೌವ್ (21) ಬಂಧಿತ ಬೈಕ್ ಕಳ್ಳ.
ಈ ಆರೋಪಿಯು ತನ್ನ ಮೋಜು, ಮಸ್ತಿ ಮತ್ತು ಐಷರಾಮಿ ಜೀವನಕ್ಕಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆ.ಆರ್.ಪುರ, ಮಹದೇವಪುರ, ವೈಟ್ಫೀಲ್ಡ್, ರಾಮಮೂರ್ತಿನಗರ, ಬಯ್ಯಪ್ಪನಹಳ್ಳಿ ಹೆಣ್ಣೂರು, ಎಚ್ಎಎಲ್, ಸಿದ್ದಾಪುರ, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಲಹಳ್ಳಿ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ರಸ್ತೆಗಳ ಪಕ್ಕದಲ್ಲಿ ಮನೆ ಅಂಗಡಿಗಳ ಮುಂಭಾಗ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದನು.
ರಾತ್ರಿ ಹಾಗೂ ಹಗಲು ವೇಳೆಯಲ್ಲಿ ಹೋಗಿ ಅವುಗಳ ಹ್ಯಾಂಡ್ಲ್ಯಾಕ್ಗಳನ್ನು ಮುರಿದು ವೈರ್ಗಳನ್ನು ಜೋಡಿಸಿ ವಾಹನವನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಯು ಮಾರಾಟ ಮಾಡುವ ಸಲುವಾಗಿ ಕಳ್ಳತನ ಮಾಡಿ ತಂದಿರುವ ದ್ವಿಚಕ್ರ ವಾಹನಗಳನ್ನು ಕೆ.ಆರ್.ಪುರ ಠಾಣೆ ವ್ಯಾಪ್ತಿಯ ಸ್ಥಳಗಳಲ್ಲಿ, ಖಾಲಿ ನಿರ್ಜನ ಪ್ರದೇಶಗಳಲ್ಲಿ ಹಾಗೂ ತಮ್ಮ ಸಂಬಂಧಿಯ ವಾಸದ ಮನೆಗಳ ಮುಂದೆ ನಿಲ್ಲಿಸಿದ್ದ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಎಸ್ಐಗಳಾದ ಮುನಿವೆಂಕಟಪ್ಪ, ಸುಬ್ರಹ್ಮಣಿ, ಹೆಡ್ಕಾನ್ಸ್ಟೆಬಲ್ಗಳು ಕಾರ್ಯಾಚರಣೆ ಕೈಗೊಂಡು ದೇವಸಂದ್ರದ ಜೆ.ಸಿ.ಲೇಔಟ್ನ ಹಾದಿ ಮಸೀದಿಯ ಹತ್ತಿರ ಆರೋಪಿಯನ್ನು ಬಂಧಿಸಿ ಪಿಎಸ್ಐ ಪ್ರದೀಪ್ ಗೌಡ ಅವರು ತನಿಖೆ ಕೈಗೊಂಡಿದ್ದಾರೆ.
ಡಿಸಿಪಿ ಗಿರೀಶ್ ಅವರ ನಿರ್ದೇಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೆ.ಆರ್.ಪುರ ಠಾಣೆ ಇನ್ಸ್ಪೆಕ್ಟರ್ ನಂದೀಶ್, ಪಿಎಸ್ಐ ಪ್ರದೀಪ್ ಗೌಡ ಹಾಗೂ ಸಿಬ್ಬಂದಿಗಳ ತಂಡವನ್ನು ಹಿರಿಯ ಅಕಾರಿಗಳು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.