ಬೆಂಗಳೂರು,ಫೆ.5-ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ನಗರ ಅರಣ್ಯ ಯೋಜನೆ ಜಾರಿಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸಿಲಿಕಾನ್ ಸಿಟಿ ಸಂಪೂರ್ಣ ಕಾಂಕ್ರಿಟ್ ನಾಡಾಗಿ ಪರಿವರ್ತನೆಗೊಂಡಿರುವುದನ್ನು ಮನಗಂಡು ನಗರದಲ್ಲಿ ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಎರಡು ಲಕ್ಷ ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಅವರು ರಾಕೇಶ್ಸಿಂಗ್ ಮತ್ತು ಗೌರವ್ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.
ಪಾಲಿಕೆ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಲಕ್ಷ ಸಸಿ ನೆಡುವುದರ ಜೊತೆಗೆ ಆ ಸಸಿಗಳ ರಕ್ಷಣೆಗೆ ವೃಕ್ಷ ರಕ್ಷಕಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಪುನಿತ್ರಾಜ್ಕುಮಾರ್ ಹೆಸರಿನಲ್ಲಿ ನಗರ ಅರಣ್ಯ ಯೋಜನೆ ಜಾರಿಗೆ ತರುವಂತೆ ರಾಘವೇಂದ್ರ ರಾಜ್ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ. ಅವರ ಕೋರಿಕೆಯಂತೆ ಯೋಜನೆ ಜಾರಿಗೆ ತಂದು ಮುಂಬರುವ ಬಜೆಟ್ನಲ್ಲಿ ಯೋಜನೆ ಜಾರಿಗೆ ಅವಶ್ಯವಿರುವ ಹಣ ಮೀಸಲಿಡಬೇಕು ಎಂದು ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ.
