ನವದೆಹಲಿ,ಜು.20- ಕೇರಳದ ಕೊಲ್ಲಂ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ನೀಟ್-ಯುಜಿ 2022ರ ಪರೀಕ್ಷೆ ವೇಳೆ ನಡೆದಿದೆ ಎನ್ನಲಾದ ಅಹಿತಕರ ಘಟನೆಯ ಸತ್ಯಾನ್ವೇಷಣೆಗೆ ಮೂರು ಜನರ ಸಮೀತಿಯೊಂದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಚಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಹಿರಿಯ ನಿರ್ದೇಶಕ ಡಾ.ಸಾಧನ ಪರಾಶರ್, ತಿರುವನಂತಪುರಂನ ಸರಸ್ವತಿ ವಿದ್ಯಾಲಯ ಹರಪೂರ ವಟಿಯೋರ್ಕಾವ್ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ, ಯರ್ನಾಕುಲಂನ ಪ್ರಗತಿ ಅಕಾಡೆಮಿಯ ಸುಚಿತ್ರಾ ಸಜಿಂತಾ ಅವರುಗಳು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಬೇಕು. ಇದಕ್ಕೆ ಸಂಬಂಧಪಟ್ಟ ಭದ್ರತೆ ಹಾಗೂ ಶಿಷ್ಟಾಚಾರಗಳನ್ನು ಸ್ಥಳೀಯ ಆಡಳಿತ ಒದಗಿಸಬೇಕು. ನಾಲ್ಕು ವಾರಗಳ ಒಳಗಾಗಿ ಈ ಸಂಬಂಧಪಟ್ಟಂತೆ ಸುದೀರ್ಘ ಸ್ಪಷ್ಟ ವರದಿ ನೀಡಬೇಕೆಂದು ಸೂಚಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಪರೀಕ್ಷೆಗಾಗಿ ಜು.17ರಂದು ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಸಿ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪಗಳಿದ್ದವು. ವಿದ್ಯಾರ್ಥಿನಿಯೊಬ್ಬರು ಈ ಸಂಬಂಧಪಟ್ಟಂತೆ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆಗೆ ಆದೇಶಿಸಲಾಗಿದೆ. ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರೀಕ್ಷಾ ಸಂಸ್ಥೆ ಆ ರೀತಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದೂರು ಕೊಟ್ಟ ಕೊವಿದ್ಯಾರ್ಥಿನಿ ಕಾಲ್ಪನಿಕ ಆರೋಪ ಮಾಡಿದ್ದಾರೆ. ಆದರೂ, ರಾಜಕೀಯವಾಗಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಾದ-ವಿವಾದಗಳಿಗೆ ವೇದಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಸಂಸ್ಥೆ ವಿವಾದಕ್ಕೆ ತೆರೆ ಎಳೆಯಲು ಸತ್ಯ ಶೋಧನಾ ಸಮಿತಿ ರಚಿಸಿದೆ.