Home Blog Page 111

ಮೂರು ಕರುಗಳಿಗೆ ಜನ ನೀಡಿದ ಕಂಬಾಳು ಮಠದ ಹಸು

ದಾಬಸ್‌‍ ಪೇಟೆ, ಸೆ.14- ಹಸುಗಳು ಸಾಮಾನ್ಯವಾಗಿ ಎರಡು ಕರುಗಳಿಗೆ ಜನ ನೀಡುವುದನ್ನು ನೋಡಿದ್ದೇವೆ. ಆದರೆ, ಹೋಬಳಿಯ ಕಂಬಾಳು ಮಠದ ಹಸುವೊಂದು ಮೂರು ಕರುಗಳಿಗೆ ಜನ ನೀಡಿ ಅಚ್ಚರಿ ಮೂಡಿಸಿದೆ.

ಕಪ್ಪು ಮತ್ತು ಬಿಳಿಯ ಮಚ್ಚೆ ಹೊಂದಿರುವ ಹಸುವು ಶ್ರೀಮಠಕ್ಕೆ ಪ್ರೀತಿಪಾತ್ರವಾದ ಲಕ್ಷ್ಮಿ ಹೆಸರಿನ ಗೋವು ಇದಾಗಿದ್ದು, ಒಂದೇ ಬಾರಿಗೆ ಮೂರು ಕರುಗಳನ್ನು ಜನ ನೀಡಿದೆ.
ಮೂರು ಕರುಗಳಿಗೆ ಜನ ನೀಡಿರುವ ವಿಷಯವು ಮಠದ ಆಜುಬಾಜಿನವರಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ವಿಚಾರವನ್ನು ಅರಿತ ಮಠಾಧೀಶರಾದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಿಬ್ಬಂದಿ ಗೋಮಾತೆಯಾದ ಲಕ್ಷ್ಮಿ ಮತ್ತು ಮೂರು ಕರುಗಳ ಆರೈಕೆ ಮಾಡಿದ್ದು ,ತಾಯಿ ಹಸು ಸಹ ತನ್ನ ಮುದ್ದು ಕರುಗಳನ್ನು ಮುದ್ದಿಸುತ್ತಿದ್ದ ದೃಶ್ಯ ನೋಡುಗರಲ್ಲಿ ಮುದವನ್ನುಂಟು ಮಾಡಿತ್ತು.

ತಾಯಿ ಹಸು ಮತ್ತು ಮೂರು ಕರುಗಳು ಆರೋಗ್ಯ ಮತ್ತು ಲವಲವಿಕೆಯಿಂದ ಇದ್ದು, ಶ್ರೀಮಠದಲ್ಲಿ ಸಂತಸವನ್ನುಂಟುಮಾಡಿದೆ.

ಹಾಸನ್ ಟ್ರಕ್ ದುರಂತ : ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಕುಸಿದುಬಿದ್ದ ಚಾಲಕ ಮತ್ತೆ ಆಸ್ಪತ್ರೆಗೆ ದಾಖಲು

ಹಾಸನ,ಸೆ.14– ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ 10 ಜನರ ಸಾವಿಗೆ ಕಾರಣನಾದ ಟ್ರಕ್‌ ಚಾಲಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಕುಸಿದುಬಿದ್ದಿದ್ದು ಪುನಃ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಟ್ರಕ್‌ ಚಾಲಕ ಭುವನೇಶ್‌ನ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಆತನನ್ನು ನಾಗಮಂಗಲದ ಬೆಳ್ಳೂರಿನ ಬಿಜಿಎಸ್‌‍ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಬಿಡುಗಡೆ ಮಾಡಲಾಗಿತ್ತು. ಪೊಲೀಸರು ಆತನನ್ನು ಕರೆದೊಯ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ತೀರ್ಮಾನಿಸಿದ್ದರು.

ಆದರೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಎದೆನೋಯುತ್ತಿದೆ ಎಂದು ಕುಸಿದುಬಿದ್ದಿದ್ದಾನೆ. ಆತನನ್ನು ಪೊಲೀಸರು ಮತ್ತೆ ಹಿಮ್ಸೌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿ ಟ್ರಕ್‌ ಚಲಾಯಿಸಿದ್ದನು ಎಂಬುದಕ್ಕೆ ರಕ್ತ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬರುವ ಸಾಧ್ಯತೆಯಿದೆ.

ಪಾಕ್‌ ವಿರುದ್ಧದ ಪಂದ್ಯ ರದ್ದು ಮಾಡಲ್ಲ ; ಬಿಸಿಸಿಐ ಸ್ಪಷ್ಟನೆ

ನವದೆಹಲಿ, ಸೆ.14- ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಪಾಕ್‌ ವಿರುದ್ಧ ಪಂದ್ಯವಾಡದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಉದ್ಬವಿಸುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ಪಂದ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ಹೊರಡಿಸಿದ ನೀತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಹೇಳಿದರು.

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ್‌ ನಂತರದ ದೇಶದ ಪ್ರಸ್ತುತ ಮನಸ್ಥಿತಿಯ ಹೊರತಾಗಿಯೂ, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಪಂದ್ಯವನ್ನು ಮುಂದುವರಿಸಲು ಭಾರತೀಯ ಕ್ರಿಕೆಟ್‌ ಮಂಡಳಿಯನ್ನು ಒತ್ತಾಯಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳು ಗದ್ದಲ ಎಬ್ಬಿಸಿರುವ ನಡುವೆಯೇ ಅವರ ಈ ಹೇಳಿಕೆ ಬಂದಿದೆ.
ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದರೆ, ಭವಿಷ್ಯದಲ್ಲಿ ಒಲಿಂಪಿಕ್‌್ಸ ಮತ್ತು ಕಾಮನ್‌ವೆಲ್ತ್‌‍ ಕ್ರೀಡಾಕೂಟವನ್ನು ಆಯೋಜಿಸುವ ದೇಶದ ಕನಸುಗಳಿಗೆ ಹೊಡೆತ ಬೀಳುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.

ಈ ವರ್ಷದ ಆರಂಭದಲ್ಲಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಸಮಯದಲ್ಲಿ 26 ಅಮಾಯಕ ಜೀವಗಳು ಬಲಿಯಾದವು. ನಂತರ ಭಾರತವು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿತು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು. ಭಾರತ ಸರ್ಕಾರವು ಗಡಿಯುದ್ದಕ್ಕೂ ಹಲವಾರು ಹ್ಯಾಂಡಲ್‌ಗಳನ್ನು ನಿಷೇಧಿಸಿತು ಮತ್ತು ಕ್ರಿಕೆಟ್‌ ಸಂಬಂಧಗಳನ್ನು ಸಹ ನಿರ್ಬಂಧಿಸಲಾಗುತ್ತದೆ ಎಂದು ನಂಬಲಾಗಿತ್ತು.

ಏಷ್ಯಾ ಕಪ್‌ 2025 ರಲ್ಲಿ ಭಾರತಕ್ಕೆ ಪಾಕಿಸ್ತಾನವನ್ನು ಆಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದಾಗ್ಯೂ, ಏಷ್ಯಾ ಕಪ್‌ ವೇಳಾಪಟ್ಟಿಯನ್ನು ಘೋಷಿಸಿದ ನಂತರ, ಅಭಿಮಾನಿಗಳು ತಮ್ಮ ಕೋಪವನ್ನು ಕಡೆಗೆ ನಿರ್ದೇಶಿಸಿದರು, ಪಾಕಿಸ್ತಾನದ ವಿರುದ್ಧ ಆಡುವ ಅಗತ್ಯವನ್ನು ಪ್ರಶ್ನಿಸಿದರು. ಆದಾಗ್ಯೂ, ಅಂತರರಾಷ್ಟ್ರೀಯ ನಿಷೇಧವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ, ಆದ್ದರಿಂದ ಭಾರತಕ್ಕೆ ಭಾನುವಾರ ಆಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸೈಕಿಯಾ ಈಗ ಹೇಳಿದ್ದಾರೆ.

ಬೆಂಗಳೂರಿಗರೇ ಗಮನಿಸಿ, ನಾಳೆಯಿಂದ 3 ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

ಬೆಂಗಳೂರು,ಸೆ.14- ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ನಾಳೆಯಿಂದ ಸೆ.17ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ತಿಳಿಸಿದ್ದಾರೆ.

ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆಯಿಂದ ಮೂರು ದಿನಗಳ ಕಾಲ ಸಂಚಾರಿ ಕಾವೇರಿ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಈ ಟ್ಯಾಂಕರ್‌ಗಳನ್ನು ತುರ್ತು ನೀರು ಸರಬರಾಜಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಾಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯು ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂದಿದ್ದಾರೆ.

ಕಾವೇರಿ 5ನೇ ಹಂತದ ಜಲರೇಚಕ ಯಂತ್ರಾಗಾರಗಳು(ಪಂಪಿಂಗ್‌ ಸ್ಟೇಷನ್‌) ನಾಳೆ ಬೆಳಗಿನ ಜಾವ ಒಂದು ಗಂಟೆಯಿಂದ ಸೆ.17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ. ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1,ಹಂತ-02,ಹಂತ-3, ಹಂತ-4ರ 1ನೇ ಘಟ್ಟ ಮತ್ತು 2ನೇ ಘಟ್ಟಗಳ ಜಲರೇಚಕ ಯಂತ್ರಾಗಾರಗಳನ್ನು ಸೆ.16ರ ಬೆಳಿಗ್ಗೆ 6ರಿಂದ ಸೆ.17ರ ಬೆಳಿಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಚಾರಿ ಕಾವೇರಿ ಯೋಜನೆ ಮೂರು ದಿನ ಸ್ಥಗಿತ: ಸಂಚಾರಿ ಕಾವೇರಿ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ, ತುರ್ತು ನೀರು ಸರಬರಾಜಿಗಾಗಿ ಬಳಸಿಕೊಳ್ಳಲಾಗುವುದು. ಇದರಿಂದ ಸಂಚಾರಿ ಕಾವೇರಿ ಯೋಜನೆಯ ಸೇವೆಯಲ್ಲಿ ಈ ಮೂರು ದಿನಗಳ ಕಾಲ ವ್ಯತ್ಯಯವಾಗಲಿದೆ . ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳಲು ಅವರು ಕೋರಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2025)

ನಿತ್ಯ ನೀತಿ : ಒಂದು ತಪ್ಪನ್ನು ಕ್ಷಮಿಸುವುದೆಂದರೆ ಇನ್ನಷ್ಟು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದಂತೆ.

ಪಂಚಾಂಗ : ಭಾನುವಾರ, 14-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ರೋಹಿಣಿ / ಯೋಗ: ವಜ್ರ / ಕರಣ: ಬಾಲವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.22
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ದೊರೆಯುತ್ತವೆ.
ವೃಷಭ: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.
ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ ಉಂಟಾಗಬಹುದು. ಎಚ್ಚರಿಕೆಯಿಂದಿರಿ.

ಕಟಕ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾ ಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.
ಸಿಂಹ: ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾಗುವುದು.
ಕನ್ಯಾ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.

ತುಲಾ: ಅದೃಷ್ಟ ನಿಮ್ಮೆಡೆಗಿ ದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರಾಗಲಿದೆ.
ಧನುಸ್ಸು: ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಅದಕ್ಕೆ ಕಾರಣ ತಿಳಿಯುವುದು ಕಷ್ಟ.

ಮಕರ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳು ವಿರಿ. ಮಕ್ಕಳಿಂದ ಅನುಕೂಲವಾಗಲಿದೆ.
ಕುಂಭ: ವಾಹನ ಚಲಾಯಿಸುವಾಗ ವಿಶೇಷ ಕಾಳಜಿ ವಹಿಸಿ. ದೈನಂದಿನ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಮೀನ: ಸ್ನೇಹಿತನಿಗೆ ಸಹಾಯ ಮಾಡುವಿರಿ. ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ.

ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ

ಹಾಸನ, ಸೆ.13- ಗಣೇಶೋತ್ಸವದ ಮೇಲೆ ಲಾರಿ ಹರಿದು 9 ಮಂದಿ ಮೃತಪಟ್ಟ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಜೆಡಿಎಸ್‌‍ ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿಯೇ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು ಎರಡು ಸಾವಿರ ಮಂದಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬ್ಯಾರಿಕೇಡ್‌ಗಳನ್ನು ಹಾಕಿ ಸೂಕ್ತ ಭದ್ರತೆ ಒದಗಿಸಬೇಕಾಗಿತ್ತು. ಆದರೆ ಪೊಲೀಸರು ಆ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರೇವಣ್ಣ ಆರೋಪಿಸಿದ್ದಾರೆ.

ಒಂದು ಕಡೆ ವಾಹನ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಮತ್ತೊಂದು ಕಡೆ ಗಣೇಶೋತ್ಸವ ಮೆರವಣಿಗೆ ಸಾಗಿದೆ. ಚಾಲಕ ಕುಡಿದು ವಾಹನ ಚಲಾಯಿಸಿದ್ದಾನೆ. ಅತಿಯಾದ ವೇಗದಲ್ಲಿ ಬಂದಿದ್ದರಿಂದ ಲಾರಿ ನಿಯಂತ್ರಣಕ್ಕೆ ಸಿಗದೆ ದುರಂತ ಸಂಭವಿಸಿದೆ ಎಂದು ಹೇಳಿದರು. ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೂರಜ್‌ ರೇವಣ್ಣ ಮಾತನಾಡಿ, ಒಂದೂವರೆ ಗಂಟೆಗೂ ಮೊದಲು ನಾನು ಮೊಸಳೆಹೊಸಹಳ್ಳಿಯ ಗಣೇಶೋತ್ಸವಕ್ಕೆ ಬಂದು ಯುವಕರನ್ನು ಮಾತನಾಡಿಸಿ, ಬೇರೆ ಕಾರ್ಯಕ್ರಮ ಇದ್ದುದ್ದಕ್ಕಾಗಿ ಹೋಗಿದ್ದೆ. ಈಗ ನೋಡಿದರೆ ಇಲ್ಲಿ ಹೆಣಗಳು ಚೆಲ್ಲಾಪಿಲ್ಲಾಗಿ ಬಿದ್ದಿವೆ. ಕಣ್ಣಿಂದ ನೋಡಲಾಗುತ್ತಿಲ್ಲ, ದುಃಖ ತಡೆಯಲಾಗುತ್ತಿಲ್ಲ ಎಂದು ಶೋಕಿಸಿದರು.

ನಾನು ಒಂದೂವರೆ ಗಂಟೆಯ ಹಿಂದೆ ಇಲ್ಲಿಗೆ ಬಂದಾಗ ಒಬ್ಬ ಪೊಲೀಸ್‌‍ ಸಿಬ್ಬಂದಿ ಇರಲಿಲ್ಲ, ಪೊಲೀಸ್‌‍ ವಾಹನಗಳು ಇರಲಿಲ್ಲ. ಇದು ಸಂಪೂರ್ಣವಾಗಿ ಪೊಲೀಸ್‌‍ ವೈಫಲ್ಯದಿಂದಾದ ದುರ್ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊಸಳೆಹೊಸಹಳ್ಳಿ ದುರಂತ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು

ಹಾಸನ, ಸೆ.13-ಮೊಸಳೆಹೊಸಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಒತ್ತಾಯಿಸಿದರು.

ಅಪಘಾತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಜನ ಮೃತಪಟ್ಟಿದ್ದಾರೆ. ದುರಂತಕ್ಕೆ ಟ್ರಕ್‌ ಚಾಲಕ ಭುವನ್‌ ಬೇಜವಾಬ್ದಾರಿಯೇ ಕಾರಣ ಎಂದರು.

ಈಗಾಗಲೇ ಆತನ ವಿರುದ್ಧ ಗೋರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಜನರಿಂದ ತೀವ್ರ ಥಳಿತಕ್ಕೊಳಪಟ್ಟ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ. ಆತನ ವಿರುದ್ಧ ಎಲ್ಲಾ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲದ ಕಾರಣ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರದ ಪರವಾಗಿ ನಾನು ಹಾಗೂ ಹಾಸನ ಜಿಲ್ಲೆ ಸಂಸದ ಶ್ರೇಯಸ್‌‍ ಎಂ. ಪಾಟೀಲ್‌ ಅವರೂ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕಿದೆ. ಈ ಬಗ್ಗೆಯೂ ಪತ್ರದಲ್ಲಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ಕೆಲವರು ಈ ಅಪಘಾತದ ಘಟನೆಗೆ ಕೋಮು ಬಣ್ಣ ನೀಡುತ್ತಿರುವುದೂ ಸಹ ಕಂಡುಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆಯೂ ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳ ಲಾಗುವುದು. ಈ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ಅನಿವಾರ್ಯ : ಸಿಎಂ

ಮೈಸೂರು, ಸೆ.13- ಶಾಂತಿ ಭಂಗಕ್ಕೆ ಪ್ರಯತ್ನಿಸಿ, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡಿ, ಪ್ರಚೋದನೆ ಮಾಡತ್ತಿದ್ದಾರೆ. ಶಾಂತಿ, ನೆಮದಿ, ಸೌಹಾರ್ದತೆ ಪಾಲನೆ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದರು.

ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದೂ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ಹಿಂದೂ ಅಲ್ಲವೇ? ನನ್ನ ಹೆಸರಿನಲ್ಲಿ ಇಬ್ಬರು ದೇವರ ಹೆಸರುಗಳಿವೆ. ಸಿದ್ದ ಎಂದರೆ ಈಶ್ವರನ ಹೆಸರು, ರಾಮ ವಿಷ್ಣುವಿನ ಹೆಸರು ಎಂದು ತಿರುಗೇಟು ನೀಡಿದರು.

ದಸರಾ ಮುಗಿಯುವವರೆಗೂ ಮಾಜಿ ಸಂಸದ ಪ್ರತಾಪ್‌ ಸಿಂಹನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂಬ ವಿವಿಧ ಸಂಘಟನೆಗಳ ಬೇಡಿಕೆಯನ್ನು ಪೊಲೀಸರು ಪರಿಶೀಲಿಸುತ್ತಾರೆ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮಷ್ತಾಕ್‌ರನ್ನು ಆಯ್ಕೆ ಮಾಡಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು, ಯಾವ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂಬುದನ್ನು ವಿವರಣೆ ನೀಡಬೇಕು. ನ್ಯಾಯಾಲಯ ನೀಡುವ ತೀರ್ಮಾನವನ್ನು ಸರ್ಕಾರ ನಿರೀಕ್ಷಿಸುತ್ತಿದೆ. ದಸರಾ ಸಾಂಸ್ಕೃತಿಕ ಆಚರಣೆಯಾಗಿದ್ದು, ಇಂತಹದ್ದೇ ಧರ್ಮದವರು ಭಾಗವಹಿಸಬೇಕೆಂಬ ನಿಯಮಗಳಿಲ್ಲ ಎಂದರು.

ತನಿಖೆ ವಿಳಂಬವಿಲ್ಲ: ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆ ನಡೆಯುತ್ತಿದೆ. ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ, ಅನಗತ್ಯವಾಗಿ ವಿಳಂಬ ಮಾಡುವಂತೆಯೂ ಇಲ್ಲ ಎಂದು ಹೇಳಿದರು.

ಮತಾಂತರ ಶೋಷಿತರ ಹಕ್ಕು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಹುಟ್ಟುಹಾಕಲಾಗುತ್ತಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಅರ್ಥಹಿನ. ಮುಂದೆ ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡುತ್ತದೆ. ಆಗ ಬಿಜೆಪಿಯವರು ಇದೇ ರೀತಿ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಮತಾಂತರ ಬೇಡವೆಂದು ನಾವು ಹೇಳಿದರೂ ವ್ಯವಸ್ಥೆಯ ಪರಿಣಾಮದಿಂದಾಗಿ ಮತಾಂತರವಾಗುತ್ತಾರೆ. ನಮ ಹಿಂದೂ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶಗಳಿಲ್ಲ ಅದಕ್ಕಾಗಿ ಮತಾಂತರವಾಗುತ್ತಿವೆ. ಅಸ್ಪಶ್ಯತೆ ಏಕೆ ಬಂತು. ಯಾವುದೇ ಧರ್ಮದಲ್ಲಿ ಅಸಮಾನತೆ ಇದ್ದರೂ ಶೋಷಣೆಗೆ ಒಳಗಾದವರಿಗೆ ಮತಾಂತರವಾಗುವ ಹಕ್ಕುಗಳಿರುತ್ತವೆ ಎಂದರು.

ಮತಾಂತರಗೊಂಡಿರುವವರು ಅದೇ ಧರ್ಮ ಅಥವಾ ಜಾತಿಯನ್ನು ಸಮೀಕ್ಷೆಯಲ್ಲಿ ಬರೆಸುತ್ತಾರೆ. ಒಂದು ವೇಳೆ ನಾನು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಭಾವಿಸುವುದಾರೆ… ಮತಾಂತರವಾಗುವುದಿಲ್ಲ ಹಾಗೆ ಭಾವಿಸುವುದಾದರೆ ಸಮೀಕ್ಷೆಯಲ್ಲಿ ಮತಾಂತರವಾಗಿರುವ ಧರ್ಮವನ್ನೇ ಬರೆಸಬೇಕಾಗುತ್ತದೆ ಎಂದರು.

ವಿಪಕ್ಷಗಳ ಒತ್ತಡಕ್ಕೆ ಮಣಿದ ಪ್ರಧಾನಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರೊಧ ಪಕ್ಷಗಳ ಒತ್ತಡಕ್ಕೆ ಮಣಿದು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಗಲಾಟೆ ನಡೆಯುತ್ತಿದ್ದಾಗ ಅಲ್ಲಿಗೆ ಹೋಗಲಿಲ್ಲ. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವಾಗ ಭೇಟಿ ನೀಡಿದ್ದಾರೆ. ಎರಡು ವರ್ಷಗಳಿಂದ ಏಕೆ ಸುಮನಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಮುಖ್ಯಮಂತ್ರಿಗಳಿಗೆ ತಿಳಿ ಹೇಳಲಿ:
ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟೆ ನಿರ್ಮಿಸಲು ಗೋವಾ ಸರ್ಕಾರ ಅಡ್ಡಿ ಪಡಿಸುತ್ತಿದೆ. ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಲು 2010ರಲ್ಲಿ 15 ವರ್ಷಗಳ ಹಿಂದೆಯೇ ನ್ಯಾಯಾಧೀಕರಣ ಆದೇಶ ನೀಡಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತದೆ.

ಕಾವೇರಿ ನದಿ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲಿತ ಆಣೆಕಟ್ಟು ನಿರ್ಮಿಸಲು ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಯವರಿಗೆ ತಿಳಿ ಹೇಳಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ ಅವರಿಗೆ ಬುದ್ಧಿ ಹೇಳಲಿ ಎಂದರು.

ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ:
ಹಾಸನ ಗಣೇಶೋತ್ಸವದ ವೇಳೆ ಲಾರಿ ಹರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಪರಿಹಹಾರ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ಹಾಸನದ ದುರಂತವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದರೆ, ಇದೇ ರೀತಿಯ ಇತರ ಪ್ರಕರಣಗಳನ್ನು ಪರಿಗಣಿಸಬೇಕಾಗುತ್ತದೆ. ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಇದು ಸಾವಿಗೆ ಸಮವಲ್ಲ. ಆದರೆ ಕುಟುಂಬದ ಜೊತೆ ನಾವಿದ್ದೇವೆ ಎಂದು ಮಾನಸಿಕ ಸ್ಥೈರ್ಯ ತುಂಬುವ ಕ್ರಮ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಪಘಾತ ಆಕಸಿಕ ಘಟನೆ ಅದಕ್ಕೆ ಸರ್ಕಾರವೇ ಹೊಣೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಗಣೇಶೋತ್ಸವ ದುರಂತ : 9 ಜನರನ್ನು ಬಲಿಪಡೆದ ಟ್ರಕ್ ಚಾಲಕನ ವಿಚಾರಣೆ

ಹಾಸನ, ಸೆ.13- ಹೆದ್ದಾರಿಯಲ್ಲಿ ಎಡಭಾಗದಲ್ಲಿ ಹೋಗುತ್ತಿದ್ದ ಸರಕು ಸಾಗಣಿಕೆಯ ಲಾರಿ ಬಲಭಾಗಕ್ಕೆ ತಿರುಗಿ ರಸ್ತೆ ವಿಭಜಕವನ್ನು ದಾಟಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಹರಿದಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲೆಯ ಎಸ್‌‍ಪಿ ಮೊಹಮದ್‌ ಸುಜಿತಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8.30ರಿಂದ 8.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಮೊಸಳೆಹೊಸಹಳ್ಳಿಯ ಹೆದ್ದಾರಿಯಲ್ಲಿ ಮೆರವಣಿಗೆ ತೆರಳುತ್ತಿದ್ದ ಕೊನೆಯ ಭಾಗದ ಜನರ ಮೇಲೆ ಲಾರಿ ಹರಿದಿದೆ ಎಂದಿದ್ದಾರೆ.

ಸರಕು ಸಾಗಾಣಿಕೆ ವಾಹನ ನೇರವಾಗಿ ಸಾಗಬೇಕಿತ್ತು. ಆದರೆ, ಬಲಭಾಗಕ್ಕೆ ತಿರುಗಿದೆ. ಇದಕ್ಕೆ ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ. ಮೂರು ಅಡಿ ಎತ್ತರದ ಬ್ಯಾರಿಕೇಡ್‌ ಅನ್ನು ಹೊಡೆದು ಎದುರಿಗೆ ಬರುತ್ತಿದ್ದ ಜನರ ಮೇಲೆ ಹರಿದಿದೆ ಎಂದಿದ್ದಾರೆ.

ಕಂಟೈನರ್‌ ಚಾಲಕ ಭುವನೇಶ್‌ನನ್ನು ವಿಚಾರಣೆ ನಡೆಸಲಾಗಿದ್ದು, ಆತ ಹೊಳೆನರಸೀಪುರದ ಬಸವನಪುರದವನು ಎಂದು ಗೊತ್ತಾಗಿದೆ. ಕಂಟೈನರ್‌ನಲ್ಲಿ ಯಾವ ಸರಕುಗಳಿದ್ದವು ಎಂಬುನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸದರಿ ಲಾರಿ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಸರಕು ಸಾಗಾಣಿಕೆ ಕೇಂದ್ರ ಕಚೇರಿ ದೊಡ್ಡಬಳ್ಳಾಪುರದಲ್ಲಿದೆ ಎಂದು ಪ್ರಾಥಮಿಕವಾಗಿ ಮಾಹಿತಿ ದೊರೆತಿದೆ ಎಂದರು.

ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್‌ ಆಗ್ರಹ

ಬೆಂಗಳೂರು,ಸೆ.13- ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣೇಶ ಉತ್ಸವದ ವೇಳೆ ಸಂಭವಿಸಿದ ಆಪಘಾತದಲ್ಲಿ ಮೃತಪಟ್ಟವರು ಹಳ್ಳಿಯವರು, 10 ಲಕ್ಷ ರೂ. ಪರಿಹಾರ ಕೊಟ್ಟರೆ, ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಹಾಸನಕ್ಕೆ ಹೋಗುವೆ. ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ನೀಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಬೇಕು ಎಂದು ಒತ್ತಾಯ ಮಾಡಿದರು.

ಇದೇ ವೇಳೆ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸುತ್ತಮುತ್ತಲಿನ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಬೇಕು. ಯಾವುದೇ ಕಿಡಿಗೇಡಿಗಳು ಮಸೀದಿಯಿಂದ ಕಲ್ಲು ಹಾಕೋದಕ್ಕೆ ಅವಕಾಶ ಕೊಡಬಾರದು. ಎಲ್ಲಾ ರಸ್ತೆಯಲ್ಲಿ ಗಣೇಶ ಹೋಗಬಹುದು, ಯಾರು ಅಡ್ಡಿ ಮಾಡಬಾರದು ಅಂತ ಮುಸ್ಲಿಮರೇ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್‌ ಎಂದು ಕೋಮುಗಲಭೆ ಸೃಷ್ಟಿ ಮಾಡುತ್ತಾರೆ. ಸರ್ಕಾರ ಕೂಡಾ ಅಂತಹವರ ಕೇಸ್‌‍ ವಾಪಸ್‌‍ ಪಡೆಯುವುದರಿಂದ ಅವರಿಗೆ ಕುಮಕ್ಕು ಬರ್ತಿದೆ. ಪಾಕಿಸ್ತಾನ ಗಿರಾಕಿಗಳಿಗೆ ಪಾಠ ಕಲಿಸಬೇಕು. ಆಗ ಇಂತಹ ಘಟನೆಗಳು ಆಗುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಪ್ರಕರಣದ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌‍ಐಟಿಗೆ ಬುರುಡೆ ಅಗೆಯುವುದರಲ್ಲಿ ಇದ್ದ ಉತ್ಸಾಹ ತನಿಖೆ ಮಾಡುವುದರಲ್ಲಿ ಇಲ್ಲ. ಜಿಂಕೆಯಂತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆಯುವುದು ನೋಡಿದರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಎಂದು ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕೇಸ್‌‍ನಲ್ಲಿ ಕೇರಳ, ತಮಿಳುನಾಡು, ದೆಹಲಿಗೂ ಲಿಂಕ್‌ ಇದೆ. ಎಸ್‌‍ಐಟಿ ಅಲ್ಲಿಗೆ ಹೋಗಿಲ್ಲ. ಇದನ್ನ ನೋಡಿದ್ರೆ ತನಿಖೆ ಹಳ್ಳ ಹಿಡಿಸೋಕೆ, ಕೇಸ್‌‍ ಮುಚ್ಚಿ ಹಾಕೋ ಹುನ್ನಾರ ನಡೆಯುತ್ತಿದೆ ಎನಿಸುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ತಿಮಿಂಗಿಲಗಳು ಇವೆ. ಇವುಗಳ ಬೇಟೆಯಾಡಬೇಕು. ಆದರೆ ಸರ್ಕಾರ ಯಾರದ್ದೋ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಎಸ್‌‍ಐಟಿ ತನಿಖೆ ಹೀಗೆ ವಿಳಂಬ ಆದರೆ, ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯಲಿದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದರು.