Home Blog Page 8

ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಮರೆತ ಸರ್ಕಾರ : ಆರ್‌.ಅಶೋಕ್‌

ಬೆಂಗಳೂರು,ನ.3- ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ, ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಜಿಲ್ಲೆಗಳ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸದ ಈ ರೈತವಿರೋಧಿ ಕಾಂಗ್ರೆಸ್‌‍ ಸರ್ಕಾರ ಇದ್ದರೆಷ್ಟು, ಹೋದರೆಷ್ಟು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಇನ್ನು ರೈತರು ತಮ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು ಸ್ವಾಮಿ? ಇನ್ನೆಷ್ಟು ದಿನ ಈ ಭಂಡ ಬಾಳು ನಿಮದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸೂರ್ಯಕಾಂತಿ, ಉದ್ದಿನಕಾಳು, ಸೋಯಾಬೀನ್‌ ಹೆಸರುಕಾಳು ಬೆಳೆದ ರೈತರು ತಮ ಫಸಲು ಮಾರಲಾಗದೆ ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಕಬ್ಬು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅಲಗಾಡುತ್ತಿರುವ ಕುರ್ಚಿಯಿಂದ ಹತಾಶರಾಗಿದ್ದು, ತಾಳೆ ಕಳೆದುಕೊಂಡು ಎಲ್ಲರ ಮೇಲೂ ಸಿಡಿಮಿಡಿ ಎನ್ನುತ್ತಿದ್ದೀರಿ. ನಾಯಕತ್ವ ಬದಲಾವಣೆ ಗೊಂದಲದಿಂದ ಸಚಿವರು, ಶಾಸಕರು ದಿಕ್ಕು ತೋಚದೆ ಹೈರಾಣಾಗಿ ಮನೆಯಿಂದ ಆಚೆ ಬರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಾಣಲಿ ಹೆಲ್ಮೆಟ್‌ ಸವಾರನಿಗಾಗಿ ಪೊಲೀಸರ ಶೋಧ

ಬೆಂಗಳೂರು,ನ.3- ದಂಡದಿಂದ ತಪ್ಪಿಸಿಕೊಳ್ಳಲು ಬೈಕ್‌ ಹಿಂಬದಿ ಸವಾರನೊಬ್ಬ ಬಾಣಲಿಯನ್ನು ಹೆಲ್ಮೆಟ್‌ನಂತೆ ತಲೆ ಮೇಲೆ ಇಟ್ಟುಕೊಂಡಿರುವುದು ನಗರದಲ್ಲಿ ಕಂಡು ಬಂದಿದೆ.ಈ ಬೈಕ್‌ ಸವಾರ ಹಾಗೂ ಹಿಂಬದಿ ಸವಾರನಿಗಾಗಿ ಪೊಲೀಸರು ಶೋಧ ನಡೆಸುತ್ತಿ ದ್ದಾರೆ.

ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲೆಟ್‌ ಧರಿಸದೆ ಸಂಚರಿಸಿದರೆ ದಂಡ ಬೀಳುವುದಂತೂ ಗ್ಯಾರಂಟಿ. ಹಾಗಾಗಿ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹಿಂಬದಿ ಕುಳಿತುಕೊಂಡು ಬಾಣಲಿ ತಲೆಗೆ ಇಟ್ಟುಕೊಂಡಿರುವುದು ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನಗೆಪಾಟಲಾಗಿದೆ. ಈ ಬೈಕ್‌ನ ಹಿಂಬದಿ ಸವಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ವೈದ್ಯೆ ಕೃತಿಕಾರೆಡ್ಡಿ ಕೊಲೆ ಪ್ರಕರಣ : ಪತಿಯ ಕರಾಳ ಮುಖ ಬಹಿರಂಗ

ಬೆಂಗಳೂರು,ನ.3-ವೈದ್ಯೆ ಕೃತಿಕಾರೆಡ್ಡಿ ಕೊಲೆ ಮಾಡಿದ ನಂತರ ಆರೋಪಿ ಪತಿ ಮಹೇಂದ್ರರೆಡ್ಡಿ ನಿನಗಾಗಿ ಪತ್ನಿಯನ್ನು ಕೊಂದಿದ್ದೇನೆ ಎಂದು ತನ್ನ ಸ್ನೇಹಿತೆಗೆ ಮೆಸೇಜ್‌ ಕಳುಹಿಸಿರುವುದು ಮಾರತಹಳ್ಳಿ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪತ್ನಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹೇಂದ್ರ ರೆಡ್ಡಿಯ ಒಂದೊಂದು ಕರಾಳತೆ ಬೆಳಕಿಗೆ ಬರುತ್ತಿವೆ.ಪೊಲೀಸರ ತನಿಖೆ ವೇಳೆ ಮಹೇಂದ್ರರೆಡ್ಡಿ ವಿರುದ್ಧ ಬಗೆದಷ್ಟೂ ಒಂದೊಂದೇ ವಿಷಯಗಳು ಬಯಲಾಗುತ್ತಿವೆ.

ಆಪ್ತ ಸ್ನೇಹಿತೆ ಜೊತೆ ಮಹೇಂದ್ರರೆಡ್ಡಿ ಪ್ರತಿನಿತ್ಯ ಚಾಟಿಂಗ್‌ ಮಾಡುತ್ತಿದ್ದನು. ಅದರಿಂದ ಬೇಸರಗೊಂಡು ಆಕೆ ಈತನನ್ನು ಬ್ಲಾಕ್‌ ಮಾಡಿದ್ದಳು. ಹಾಗಾಗಿ ಫೋನ್‌ ಪೇ ನಲ್ಲಿ ಚಾಟಿಂಗ್‌ ಮಾಡಿ ಐ ಕಿಲ್‌ ಮೈ ವೈಫ್‌….. ಬಿಕಾಸ್‌‍ ಆಫ್‌ ಯು ಎಂದು ಮೆಸೇಜ್‌ ಕಳುಹಿಸಿ ತದ ನಂತರ ಆ ಮೆಸೇಜ್‌ ಡಿಲಿಟ್‌ ಆಗದ ಕಾರಣ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮಹೇಂದ್ರರೆಡ್ಡಿಯ ಮೊಬೈಲ್‌ ಫೋನನ್ನು ರಿಟ್ರೀವ್‌ ಮಾಡಿರುವ ಪೊಲೀಸರು, ಅದರಲ್ಲಿರುವ ಚಾಟಿಂಗ್‌ಗಳನ್ನು ಪರಿಶೀಲಿಸಿದಾಗ ಸ್ನೇಹಿತೆ ಜೊತೆ ಈ ರೀತಿ ಮೆಸೇಜ್‌ ಕಳುಹಿಸಿರುವುದು ಹಾಗೂ ಕೆಲವು ವೈಯಕ್ತಿಕ ವಿಚಾರಗಳು ಗೊತ್ತಾಗಿದ್ದು, ಈ ಪ್ರಕರಣಕ್ಕೆ ಇನ್ನಷ್ಟು ಸಾಕ್ಷ್ಯ ದೊರೆತಂತಾಗಿವೆ.

ಈ ಸಂಬಂಧ ಆರೋಪಿ ಮಹೇಂದ್ರರೆಡ್ಡಿ ಸ್ನೇಹಿತೆಯನ್ನೂ ಸಹ ತನಿಖಾಧಿಕಾರಿ ಕರೆದು ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಪತ್ನಿ ಕೃತಿಕಾರೆಡ್ಡಿಯ ಆರೋಗ್ಯ ಸಮಸ್ಯೆ ತಿಳಿದಿದ್ದ ಮಹೇಂದ್ರರೆಡ್ಡಿ ಒಂದು ವೇಳೆ ಪತ್ನಿಗೆ ವಿಚ್ಛೇಧನ ನೀಡಿದರೆ ಏನೂ ಸಿಗುವುದಿಲ್ಲ ಎಂದು ಅರಿತು ನಂತರ ಕೊಲೆಗೆ ಸಂಚು ರೂಪಿಸಿ ಅದರಂತೆ ಪತ್ನಿಗೆ ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ಸಹಜ ಸಾವು ಎಂದು ಬಿಂಬಿಸಿ ಒಳ್ಳೆಯವನಂತೆ ನಟಿಸಿದ್ದನು. ತದ ನಂತರ ಕೃತಿಕಾರೆಡ್ಡಿಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾನೆ.

ಲಿಫ್ಟ್ ನೊಳಗೆ ಬಟ್ಟೆ ಒಗೆದಂತೆ ಒಗೆದು ನಾಯಿಯನ್ನು ಸಾಯಿಸಿದ ಮನೆಗೆಲಸದಾಕೆ

ಬೆಂಗಳೂರು, ನ.3– ಕ್ರೂರ ಮನಸ್ಥಿತಿಯ ಮನೆಗೆಲಸದಾಕೆ ಶ್ವಾನವನ್ನು ಲಿಫ್‌್ಟನಲ್ಲಿ ಬಟ್ಟೆ ಒಗೆದ ಹಾಗೆ ಒಗೆದು ಸಾಯಿಸಿರುವ ಘಟನೆ ಬಾಗಲೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ನಗರದ ಬೆಳ್ಳಳ್ಳಿಯ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ.

ಇವರ ಮನೆ ಹಾಗೂ ದುಬಾರಿ ಬೆಲೆಯ ಶ್ವಾನ ವನ್ನು ನೋಡಿಕೊಳ್ಳಲು ತಮಿಳುನಾಡು ಮೂಲದ ಪುಷ್ಪಲತಾ ಎಂಬಾಕೆಯನ್ನು ಕಳೆದ 6ತಿಂಗಳಿಂದ ನೇಮಿಸಿಕೊಂಡಿದ್ದಾರೆ.ಪುಷ್ಪಲತಾ ಮನೆಗೆಲಸ ಮಾಡಿಕೊಂಡು ವಿಧ್ಯಾರ್ಥಿನಿ ಜೊತೆಯಲ್ಲೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.

ಅ.31 ರಂದು ರಾತ್ರಿ ಪುಷ್ಪಲತಾ ಶ್ವಾನವನ್ನು ಅಪಾರ್ಟ್‌ಮೆಂಟ್‌ನ ಲಿಫ್ಟ್ ನಲ್ಲಿ ಹೊರಗೆ ವಾಕಿಂಗ್‌ಗೆ ಕರೆದುಕೊಂಡು ಹೋಗಿ ವಾಪಸ್‌‍ ಬರುವ ಸಂದರ್ಭದಲ್ಲಿ ಲಿಫ್‌್ಟನೊಳಗೆ ಆ ನಾಯಿ ಮರಿಯನ್ನು ಬಟ್ಟೆ ಒಗೆದ ಹಾಗೆ ಒಗೆದು ಸಾಯಿಸಿದ್ದಾಳೆ.

ನಂತರ ಮನೆಗೆ ಹೋಗಿ ನಾಯಿ ಬಿದ್ದು ಸತ್ತಿದೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದಾಳೆ. ತಕ್ಷಣ ವಿದ್ಯಾರ್ಥಿನಿ ಸೆಕ್ಯೂರಿಟಿ ಗಾರ್ಡ್‌ಗೆ ವಿಚಾರಿಸಿ, ನಂತರ ಅನುಮಾನಗೊಂಡು ಸಿಸಿ ಕ್ಯಾಮೆರಾ ನೋಡಿದಾಗ ಮನೆಗೆಲಸದಾಕೆಯೇ ಸಾಯಿಸಿರುವುದು ಕಂಡು ಬಂದಿದೆ.

ಈ ದೃಶ್ಯ ಲಿಫ್ಟ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಮರಿ ಸಾಯಿಸಿರುವ ವಿಷಯ ತಿಳಿದು ಮನೆಗೆಲಸದಾಕೆಯ ವಿರುದ್ಧ ವಿದ್ಯಾರ್ಥಿನಿ ಬಾಗಲೂರು ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಪೊಲೀಸರು ಆರೋಪಿ ಪುಷ್ಪಲತಾಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಆನೆಗಳ ಸಾವು ಕುರಿತು ತನಿಖೆಗೆ ಆದೇಶ

ಬೆಂಗಳೂರು, ಅ.3-ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ಸುಳೇಗಾಳಿ ಗ್ರಾಮದಲ್ಲಿ ನಿನ್ನೆ ವಿದ್ಯುತ್‌ ಸ್ಪರ್ಶದಿಂದ ಎರಡು ಆನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆಅವರು ತನಿಖೆಗೆ ಆದೇಶಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಲೋಪವಿದ್ದಲ್ಲಿ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ಸೂಚಿಸಿದ್ದಾರೆ. ಬೇಲಿಗೆ ವಿದ್ಯುತ್‌ ಸಂಪರ್ಕ ನೀಡಿ ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಪ್ರಕರಣವನ್ನು ದಾಖಲಿಸಲು ಅವರು ನಿರ್ದೇಶನ ನೀಡಿದ್ದಾರೆ.

ಮೊದಲು ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣ ನೋಡಿಕೊಳ್ಳಿ : ಪ್ರಿಯಾಂಕ್‌ ಖರ್ಗೆ ವಿರುದ್ಧ ಅಶೋಕ್‌ ಕಿಡಿ

ಬೆಂಗಳೂರು,ನ.3- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮೊದಲು ಕಾಂಗ್ರೆಸ್‌‍ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸರಿಪಡಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರತಿಯೊಂದಕ್ಕೂ ಪ್ರಿಯಾಂಕ ಖರ್ಗೆ ಹೇಳಿದ್ದಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ಅಷ್ಟಕ್ಕೂ ನಮಗೆ ಸವಾಲು ಹಾಕಲು ಅವರ್ಯಾರು? ಮೊದಲು ನಿಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸರಿಪಡಿಸಿಕೊಂಡು ನಂತರ ಸಂಘಪರಿವಾರದ ಬಗ್ಗೆ ಮಾತನಾಡಿ ಎಂದು ತಿರುಗೇಟು ಕೊಟ್ಟರು. ಪ್ರಿಯಾಂಕ್‌ ಖರ್ಗೆ ನಮನ್ನು ಪ್ರಶ್ನೆ ಮಾಡುವ ಮೊದಲು ಅವರ ಪಕ್ಷವನ್ನು ಪ್ರಶ್ನೆ ಮಾಡಲಿ. ಅವರ ಯಾವುದೇ ಪ್ರಶ್ನೆಗಳಿಗೆ ನಾವು ಉತ್ತರ ಕೊಡುವುದಿಲ್ಲ. ಅವರ ತಟ್ಟೆಯಲ್ಲಿ ನೊಣ ಬಿದ್ದಿದೆ.ಅದರ ಕಡೆ ಮೊದಲು ನೋಡಲಿ. ಇನ್ನೊಬ್ಬರ ತಟ್ಟೆ ಮೇಲೆ ಯಾಕೆ ನೋಡ್ತಾರೆ ಎಂದು ಪ್ರಶ್ನೆ ಮಾಡಿದರು.

ಟನೆಲ್‌ ರಸ್ತೆ ಯೋಜನೆಗೆ ಅಶೋಕ್‌ ನೇತೃತ್ವದಲ್ಲಿ ಸಮಿತಿ ಮಾಡೋಣ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಸಮಿತಿ ಮಾಡಲಿ, ನಾನು ಸಮಿತಿಗೆ ಅಧ್ಯಕ್ಷ ಆಗಲು ಒಪ್ಪುತ್ತೇನೆ. ಆದರೆ ಮೊದಲು ರಸ್ತೆ ಗುಂಡಿ ಮುಚ್ಚಲಿ, ಕಸ ಸಮಸ್ಯೆ ಬಗೆಹರಿಸಿ ನಂತರ ನನಗೆ ಆಹ್ವಾನ ಕೊಡಲಿ ಎಂದು ಟಕ್ಕರ್‌ ಕೊಟ್ಟರು.

ನಿಮ ಬಳಿ ಟನೆಲ್‌ ರೋಡ್‌ ಮಾಡುವುದಕ್ಕೆ ಹಣ ಇಲ್ಲ. ಇನ್ನು ಸಮಿತಿ ಮಾಡಿ ಹಣ ಯಾಕೆ ಪೋಲು ಮಾಡುತ್ತೀರಿ? ಟನೆಲ್‌ ರಸ್ತೆ ಬಗ್ಗೆ ಸರಿಯಾದ ಚರ್ಚೆಯಾಗಿಲ್ಲ. ಬೆಂಗಳೂರು ಜನತೆಯಅಭಿಪ್ರಾಯ ಪಡೆದಿಲ್ಲ. 120 ಇಲಾಖೆಗಳ ಅನುಮತಿ ಬೇಕು, ಒಂದು ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿದರು.

ನಾವು ಅಭಿವೃದ್ಧಿ ವಿರೋಧಿಗಳಲ್ಲ. ಟನೆಲ್‌ ರೋಡ್‌ ಮಾಡುವ ಮುನ್ನ ಎಲ್ಲ ರಸ್ತೆಗುಂಡಿ ಮುಚ್ಚಿ, ನಗರದ ಕಸ ತೆಗೆಯಬೇಕು. ಅದು ಬಿಟ್ಟು ಧಮಕಿ ಹಾಕುವುದು, ಮಾಡೇ ಮಾಡುತ್ತೇವೆಂದು ಮೊಂಡುತನ ತೋರುವುದು, ಪರಿಸರಕ್ಕೆ ಹಾನಿ ಮಾಡುವುದು, ಕೆಂಪೇಗೌಡರ ಗೋಪುರ ಒಡೆಯಲು ಹೋಗುವುದು ಯಾಕೆ? ಎಂದು ಪ್ರಶ್ನೆ ಮಾಡಿದರು. ಜನರ ದನಿಯನ್ನು ಅರ್ಥ ಮಾಡಿಕೊಂಡು ಯೋಜನೆ ಮಾಡಿ. ಟನೆಲ್‌ ರಸ್ತೆ ಯೋಜನೆ ಮೂಲಕ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಕಾಂಗ್ರೆಸ್‌‍ನವರೇ ಮಾತನಾಡುತ್ತಿದ್ದಾರೆ. ರಾಜಣ್ಣ ಕ್ರಾಂತಿ ಬಗ್ಗೆ ಮಾತಾಡಿ ಮಂತ್ರಿ ಸ್ಥಾನ ಕಳೆದುಕೊಂಡರು. ರಾಮನಗರ ಶಾಸಕ ಮಾತಾಡಿದರು. ಅವರ ಕಡೆಯವರೇ ಕ್ರಾಂತಿ ಬಗ್ಗೆ ಮಾತನಾಡುತ್ತಿರುವುದು. ನಾವು ಕ್ರಾಂತಿ ಬಗ್ಗೆ ಮಾತನಾಡುತ್ತಿಲ್ಲ. ನಾವು ಅಭಿವೃದ್ಧಿ ಮಾಡಿ ಎನ್ನುತ್ತಿದ್ದೇವೆ. ಕ್ರಾಂತಿ ಭ್ರಾಂತಿ ಎಲ್ಲ ಅವರ ಪಕ್ಷದಲ್ಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಯಾದಗಿರಿ ಜಿಲ್ಲೆಯ ಕೆಂಬಾವಿಯಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಅನುಮತಿ

ಬೆಂಗಳೂರು,ನ.3- ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಮಂಗಳವಾರ ಕೆಂಬಾವಿಯಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್‌ ಭೋಯಲ್‌ ಅವರು 10 ಷರತ್ತುಗಳನ್ನು ವಿಧಿಸಿ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ.

ನಾವು ಕೂಡ ಅದೇ ದಿನ ಪಥಸಂಚಲನ ನಡೆಸುತ್ತೇವೆ. ನಮಗೂ ಕೂಡ ಅನುಮತಿ ನೀಡಬೇಕೆಂದು ಕೆಲವು ದಲಿತಪರ ಸಂಘಟನೆಗಳು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.

ಇದೀಗ ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮಂಗಳವಾರ ನಿಗದಿಯಾಗಿದ್ದ ಆರ್‌ಎಸ್‌‍ಎಸ್‌‍ ಪಥಸಂಚಲನವು ನಿಗದಿಯಂತೆ ನಡೆಯಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕೆಂಬಾವಿಯಲ್ಲಿ ಭಾರೀ ಬಿಗಿ ಭದ್ರತೆಯನ್ನು ಕೈಗೊಂಡಿದೆ.

ಪಥಸಂಚಲನ ಹಾದುಹೋಗುವ ಪ್ರಮುಖ ಬೀದಿಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಎಸ್‌‍ಆರ್‌ಪಿ, ಡಿಎಆರ್‌ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆ ಚಿತ್ತಪುರದಲ್ಲಿ ಕಾನೂನು ಸುವ್ಯವಸ್ಥೆ ಮುಂದಿಟ್ಟು ಜಿಲ್ಲಾಡಳಿತ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ನಿರ್ಬಂಧ ಹಾಕಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು, ನ.5ರಂದು ಎಲ್ಲಾ ಸಂಘಟನೆಯ ಮುಖಂಡರು ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ನ.2ರಂದು ಆರ್‌ಎಸ್‌‍ಎಸ್‌‍ ಚಿತ್ತಪುರದಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅದೇ ದಿನ ನಮಗೂ ಅವಕಾಶ ಕೊಡಿ ಎಂದು ದಲಿತರಪರ ಸಂಘಟನೆಗಳು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು. ಏಕಕಾಲಕ್ಕೆ ಆರ್‌ಎಸ್‌‍ಎಸ್‌‍ ಸೇರಿದಂತೆ ಮತ್ತಿತರ ಸಂಘಟನೆಗಳಿಗೆ ಅವಕಾಶ ಕೊಟ್ಟರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದೆಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾರಿಗೂ ಪಥಸಂಚಲನ ನಡೆಸಲು ಅವಕಾಶ ಕೊಟ್ಟಿರಲಿಲ್ಲ.

ಇದರ ಬೆನ್ನಲ್ಲೇ ಪಕ್ಕದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಮಂಗಳವಾರ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅಂದೇ ನಮಗೂ ಅವಕಾಶ ಕೊಡಿ ಎಂದು ಕೆಲವು ಸಂಘಟನೆಗಳು ಪಟ್ಟು ಹಿಡಿದಿದ್ದವು. ಈಗ ಜಿಲ್ಲಾಧಿಕಾರಿಗಳು ಆರ್‌ಎಸ್‌‍ಎಸ್‌‍ಗೆ ಪಥಸಂಚಲನ ನಡೆಸಲು ಹಸಿರುನಿಶಾನೆ ತೋರಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಅರ್ಜಿ ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿದ ಸುಪ್ರೀಂ

ಬೆಂಗಳೂರು,ನ.3- ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಅರ್ಜಿ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ ಡಿ.15ಕ್ಕೆ ಮುಂದೂಡಿದೆ. ಈ ಹಿಂದಿನ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ, ಕಾಲಾವಕಾಶ ಕೋರಿದ ಮನವಿಯನ್ನು ಪುಸ್ಕರಿಸಿ ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಮೀಸಲಾತಿಪಟ್ಟಿ ಪೂರ್ಣಗೊಳಿಸಲು ಡಿ.15ರವರೆಗೆ ಕಾಲಾವಕಾಶ ನೀಡಿದೆ.

ಇಂದು ನ್ಯಾಯಾಲಯದ ಮುಂದೆ ಹಾಜರಾದ ಸರ್ಕಾರದ ಪರ ವಕೀಲರು, ವಾರ್ಡ್‌ ವಿಂಗಡಣೆ ಮತ್ತು ಬಗ್ಗೆ 4,500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ರಾಜ್ಯಸರ್ಕಾರದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಕಾಲಕ್ಕೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ವಾರ್ಡ್‌ ವಿಂಗಡಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

15 ದಿನದೊಳಗೆ ವಾರ್ಡ್‌ ಪುನರ್‌ ವಿಂಗಡಣೆ ಹಾಗೂ ಡಿ.15ರೊಳಗೆ ಮೀಸಲಾತಿ ಪಟ್ಟಿ ಪೂರ್ಣಗೊಳಿಸುವಂತೆ ಸೂಚಿಸಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಇಂದು ಚುನಾವಣೆ ಘೋಷಣೆ ಆಗುವ ಬಗ್ಗೆ ಕುತೂಹಲ ಸೃಷ್ಟಿಯಾಗಿತ್ತು. ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಬಿಬಿಎಂಪಿ ಮಾಜಿ ಸದಸ್ಯ ಎಂ.ಶ್ರೀನಿವಾಸ್‌‍ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ತನಕ 20 ಬಾರಿ ಅರ್ಜಿಗಳು ವಿಚಾರಣೆಗೆ ಬಂದಿತು.

ಕಳೆದ ಆಗಸ್ಟ್‌ನಲ್ಲಿ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ವಾರ್ಡ್‌ ವಿಂಗಡಣೆ, ಮತದಾರರಪಟ್ಟಿ ಸಿದ್ದಪಡಿಸುವುದು ಸೇರಿದಂತೆ ಎಲ್ಲವನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಪೀಠ ನಿರ್ದೇಶನ ನೀಡಿತು. ಸರ್ಕಾರ ಇಂದು ತಾನು ಕೈಗೊಂಡಿರುವ ತಯಾರಿಯ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ.

ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ : ಸಿಎಂ ಸಿದ್ದರಾಮಯ್ಯ

ಮೈಸೂರು, ನ.3- ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ತಾವು ದೆಹಲಿಗೆ ತೆರಳುತ್ತಿದ್ದು ಸಚಿವ ಸಂಪುಟ ಪುನಾರಚನೆಯ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್‌ 15 ರಂದು ತಾವು ದೆಹಲಿಗೆ ತೆರಳುತ್ತಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ,
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಜೊತೆ ಚರ್ಚೆ ನಡೆಸುತ್ತೇನೆ ಎನ್ನುವ ಮೂಲಕ ಸಚಿವ ಸಂಪುಟ ಪುನರ್‌ರಚನೆಯ ಸುಳಿವು ನೀಡಿದರು.

ನಾಯಕತ್ವದ ಬದಲಾವಣೆ ಬಗ್ಗೆ ವರಿಷ್ಠ ಮಂಡಳಿಯ ಯಾವ ನಾಯಕರೂ ಮಾತನಾಡಿಲ್ಲ. ಹೀಗಿರುವಾಗ ಅನಗತ್ಯ ವದ್ದಂತಿಗಳು ಏಕೆ? ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ವರಿಷ್ಠ ನಾಯಕರು ಹೇಳದ ಹೊರತು, ಯಾರು ಏನೇ ಚರ್ಚೆ ಮಾಡಿದರೂ ಅದು ನಗಣ್ಯ. ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ ಅವರು ಮಾತನಾಡಬೇಕು, ಅದಕ್ಕೆ ಮಾತ್ರ ಬೆಲೆ ಇದೆ. ಅದು ಬಿಟ್ಟು ಜನ ಮಾತನಾಡುತ್ತಾರೆ ಎಂದು ವದ್ದಂತಿಗಳನ್ನು ಹರಡಬೇಡಿ. ಜನರಿಗಿಂತಲೂ ಮಾಧ್ಯಮಗಳಲ್ಲಿಯೇ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವಂತೆ ತಮಗೆ ಈ ವರೆಗೂ ಕರೆ ಬಂದಿಲ್ಲ. ಆಹ್ವಾನ ಬಂದರೆ ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದರು.ಬಿಹಾರದಲ್ಲಿ ಇಂಡಿಯಾ ರಾಜಕೀಯ ಕೂಟ ಗೆಲುವು ಸಾಧಿಸಲಿದೆ ಎಂದು ಈವರೆಗಿನ ವಾತಾವರಣದ ಪ್ರಕಾರ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಬಿಹಾರದ ಮೂಲದವರು ಹೆಚ್ಚು ಜನ ನೆಲೆಸಿದ್ದಾರೆ. ಅವರು ಬಿಹಾರಕ್ಕೆ ತೆರಳಿ ಮತ ನೀಡಬೇಕು ಎಂದು ಕರೆ ನೀಡುತ್ತಿದ್ದೇವೆ. ಆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡುತ್ತೇವೆ ಎಂದರು.

ಬಿಹಾರದಲ್ಲಿ ದೀರ್ಘಕಾಲ ನಿತೀಶ್‌ಕುಮಾರ್‌ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯವರ ಭ್ರಷ್ಟಚಾರ, ದುರಾಡಳಿತ ಕಾಂಗ್ರೆಸ್‌‍ ನೇತೃತ್ವದ ಮೈತ್ರಿ ಕೂಟದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.

ಬಿಹಾರದಲ್ಲಿ ಚುನಾವಣೆಯ ಕಾರಣಕ್ಕಾಗಿ ಏಕ ಕಾಲಕ್ಕೆ 10 ಸಾವಿರ ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 2 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಈವರೆಗೂ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ಹಣ ಖರ್ಚುಮಾಡಿದ್ದೇವೆ ಎಂದರು.
ನಿತೀಶ್‌ಕುಮಾರ್‌ ಅವರಿಗೆ ರಾಜಕೀಯ ಸಿದ್ಧಾಂತವಿಲ್ಲ. ಕಾಂಗ್ರೆಸ್‌‍, ಬಿಜೆಪಿ, ಲಾಲುಪ್ರಸಾದ್‌ ಯಾದವ್‌ರ ಆರ್‌ಜೆಡಿ ಸೇರಿದಂತೆ ಎಲ್ಲರ ಜೊತೆಯೂ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಬಿಹಾರದಲ್ಲಿ ಬಡತನ ಹೆಚ್ಚಿದ್ದು, ಅಲ್ಲಿರುವ ಬಡವರು, ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌‍ ಪರವಾಗಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಕಾಡಂಚಿನಲ್ಲಿ ಹುಲಿಗಳ ದಾಳಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಯವರು, ನಿಜ ಹೇಳಬೇಕೆಂದರೆ ಕಾಡಿನಲ್ಲಿ ಜನರ ಓಡಾಟ ಹೆಚ್ಚಾಗುತ್ತಿವೆ. ರೆಸಾರ್ಟ್‌ಗಳನ್ನು ಮಾಡಿಕೊಂಡಿದ್ದಾರೆ, ಸಫಾರಿಗಳು ಹೆಚ್ಚಾಗಿವೆ ಈ ಕಾರಣಕ್ಕೆ ವನ್ಯ ಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂದರು.

ಕಾಡಿನಲ್ಲಿ ನೀರು ಮತ್ತು ಮೇವಿನ ಕೊರತೆ ಇದೆ. ಜೊತೆಗೆ ಚಿರತೆಯ ಹಾವಳಿಯೂ ಹೆಚ್ಚಾಗಿದೆ. ಆನೆ, ಜಿಂಕೆ, ಹುಲಿ, ಚಿರತೆ, ಕಾಡುಹಂದಿ, ಕಾಡುಎಮೆಗಳು ಮೇವು, ನೀರಿಗಾಗಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ವಿಶ್ಲೇಷಿಸಿದರು.

ಅರಣ್ಯ ಸಚಿವರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ತಾವು ಕೂಡ ಅರಣ್ಯಾಧಿಕಾರಿಗಳ ಜೊತೆ ಸಭೆ ಮಾಡಿ ಚರ್ಚಿಸುತ್ತೇನೆ. ಅಕ್ರಮವಾಗಿರುವ ರೆಸಾರ್ಟ್‌ಗಳಿಗೆ ಕಡಿವಾಣ ಹಾಕಲಾಗುವುದು. ಸಫಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲಾಗಿದೆ. ಯಾರಿಂದಲೂ ಅರ್ಜಿ ಪಡೆಯಲಾಗಿಲ್ಲ. ಎಲೆ ಮರೆಕಾಯಿಯಂತಿರುವವರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ನ್ಯಾಯ, ಭೌಗೋಳಿಕ ಆದ್ಯತೆ ನೀಡಲಾಗಿದ್ದು ಪ್ರತಿ ಜಿಲ್ಲೆಗೂ ಅವಕಾಶ ಕಲ್ಪಿಸಿಲಾಗಿದೆ ಎಂದರು.

ಮೇ ತಿಂಗಳಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಪೂರ್ಣ

ಬೆಂಗಳೂರು, ನ.3– ನಗರದ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮೆಟ್ರೋ ವಿವಿಧ ಹಂತಗಳ ಕಾಮಗಾರಿ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ನಮ ಮೆಟ್ರೋ ಗುಲಾಬಿ ಮಾರ್ಗ 2026ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗ 2026 ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೀಗಾಗಿ ಬಹುನಿರೀಕ್ಷಿತ ಗುಲಾಬಿ ಮಾರ್ಗದ ಸಂಚಾರ ಮೇ ತಿಂಗಳಿನಿಂದ ಕಾರ್ಯರಂಭಗೊಳ್ಳುವುದು ಬಹುತಕ ಖಚಿತಪಟ್ಟಿದೆ.ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ ಇರುವ ಗುಲಾಬಿ ಮಾರ್ಗ 21.25 ಕಿಮೀ ವಿಸ್ತೀರ್ಣವಿದ್ದು, ಒಟ್ಟು 18 ಮೆಟ್ರೋ ಸ್ಟೇಷನ್‌ಗಳು ಇರಲಿವೆ.

ಅದರಲ್ಲಿ 6 ಎಲಿವೇಟೆಡ್‌ ಸ್ಟೇಷನ್‌ಗಳು,ಎರಡು ಅಂಡರ್‌ ಗ್ರೌಂಡ್‌ ಮೆಟ್ರೋ ಸ್ಟೇಷನ್‌ಗಳನ್ನ ಒಳಗೊಂಡಿದೆ. ಬೆಂಗಳೂರು ದಕ್ಷಿಣದಿಂದ ಉತ್ತರಕ್ಕೆ ಸಂಪರ್ಕ ಕಲ್ಪಿಸುವ ಗುಲಾಬಿ ಮಾರ್ಗದಲ್ಲಿ 13.76 ಕಿಮೀ ಭೂಗತ ಮಾರ್ಗ ಒಳಗೊಂಡಿರುವುದು ವಿಶೇಷವಾಗಿದೆ.