ಶಿವಮೊಗ್ಗ, ಜ. 25- ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತಂತೆ ವರದಿ ಸಲ್ಲಿಕೆ ಯಾದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಕಾರಾಗೃಹಗಳು ಅಪರಾಧ ಕೃತ್ಯ ನಡೆಸುವ ಕೇಂದ್ರ ಸ್ಥಾನಗಳು ಆಗಬಾರದು ಎಂಬುದು ಸರ್ಕಾರದ ಉದೇಶ ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ, ಅದರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದರು.
ನಾನು ಈ ಹಿಂದೆ ಕಾರಾಗೃಹಕ್ಕೂ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಹಾಗೂ ಕೈದಿಗಳ ಜೊತೆಗೂ ಸಂವಾದ ನಡೆಸಿದ್ದಾ. ಅಲ್ಲಿನ ವಾಸ್ತವ ಪರಿಸ್ತಿತಿಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು ಎಂದರು.
ಉನ್ನತ ಮಟ್ದದ ತನಿಖೆ: ಬೆಂಗಳೂರಿನಲ್ಲಿ ಮಾತನಾಡಿದ ಕಾರಾಗೃಹಗಳ ಡಿಜಿಪಿ ಅಲೋಕ್ ಮೋಹನ್ ಪರಪ್ಪನ ಅಗ್ರಜಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಉನ್ನತ ಮಟ್ದದ ತನಿಖೆ ಮಾಡಲಾಗುತ್ತದೆ.
ಈ ಹಿಂದೆಯೂ ತಪ್ಪಿತಸ್ಥರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗಿದೆ. ಈಗಲೂ ತಪ್ಪಿತಸ್ಥರು ಯಾರಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
ಅವ್ಯವಹಾರದಲ್ಲಿ ಭಾಗಿಯಾದ ಕೈದಿಗಳಷ್ಟೆ ಅಲ್ಲ , ಅಧಿಕಾರಿಗಳ ವಿರುದ್ಧವು ಕ್ರಿಮಿನಲ್ ಪ್ರಕರಣ ಹೂಡಲಾಗುತ್ತದೆ. ಜೈಲಿನ ಮ್ಯಾನುಯಲ್ ಬದಲಾವಣೆಗೆ ಸಿದ್ದತೆ ನಡೆಯುತ್ತಿದ್ದು, ಶೀಘ್ರವೇ ಬದಲಾವಣೆ ಮಾಡಲಾಗುವುದು ಎಂದರು.
