ನವದೆಹಲಿ.ಫೆ.8- ಎಲ್ಲ ಅಡೆತಡೆಗಳನ್ನು ಮೀರಿ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿದೆ 21ನೇ ಶತಮಾನ ಭಾರತದ್ದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ
ಮಾತನಾಡಿದ ಪ್ರಧಾನಿ ಮೋದಿ, ಭಾರತದ ಘರ್ಜನೆಯನ್ನು ಇಡೀ ವಿಶ್ವ ಕೇಳಿಸಿಕೊಳ್ಳುತ್ತಿದೆ ,ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿರುವಾಗ ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೇಗೆ ಪ್ರಗತಿಯತ್ತ ಕೊಂಡೊಯ್ಯಬೇಕು ಎಂಬುದರತ್ತ ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಕಾರದ ವೇಳೆ ದೇಶದ ಅಭಿವೃದ್ಧಿಗೆ ಅವಕಾಶ ನೀಡಲಿಲ್ಲ. ಈಗ ವಿರೋಧ ಪಕ್ಷದಲ್ಲಿದ್ದಾಗ ದೇಶದ ಅಭಿವೃದ್ಧಿಗೆ ಅಡ್ಡಿ ಮಾಡುತ್ತಿದ್ದಾರೆ ಹಾಗೂ ರಾಷ್ಟೀಯತೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ನಿಮ್ಮ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಏಕೆ ಕರೆಯುತ್ತಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಇಲ್ಲದಿದ್ದರೆ, ದೇಶದಲ್ಲಿ ತುರ್ತು ಪರಿಸ್ಥಿತಿ, ಸಿಖ್ ದಂಗೆಗಳು, ಕಾಶ್ಮೀರಿ ಪಂಡಿತರ ವಲಸೆ ನಡೆಯುತ್ತಿರಲಿಲ್ಲ ಎಂದು ಆರೋಪಿಸಿದರು
ಭಾರತವೂ ಸೇರಿದಂತೆ ಇಡೀ ವಿಶ್ವ ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದೆ. ಈ ಜಾಗತಿಕ ಮಹಾಮಾರಿಯಿಂದ ಇಡೀ ಮನುಕುಲ ನಲುಗುತ್ತಿದೆ. ಆದರೆ ಭಾರತ ಈ ಘಾತಕ ವೈರಾಣುವಿನ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದೆ. ಅಷ್ಟೇ ಅಲ್ಲ, ಜಾಗತಿಕ ಹೋರಾಟದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದುಹೇಳಿದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ದೇಶದ ಅರ್ಥವ್ಯವಸ್ಥೆ ಸ್ಥಿರವಾಗಿರುವುದು ಸಂತಸದ ಸಂಗತಿ. ಎಲ್ಲಾ ವಲಯಗಳು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಭಾರತ ಆತ್ಮನಿರ್ಭರವಾಗುವತ್ತ ದೃಢ ಹೆಜ್ಜೆಯನ್ನು ಇರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಮೃತ ಕಾಲದಲ್ಲಿರುವ ಭಾರತ, ಸ್ವಾತಂತ್ರ್ಯದ 100ನೇ ಸಂಭ್ರಮಾಚರಣೆ ವೇಳೆ ಮತ್ತಷ್ಟು ಸದೃಢವಾಗುವುದನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ಕಾಲದಲ್ಲಿ ದೇಶದ ಯುವಕರು ತೋರಿದ ಸಾಮಾಜಿಕ ಕಳಕಳಿ ಪ್ರಶಂಸನೀಯ. ದೇಶಕ್ಕಾಗಿ ನಮ್ಮ ಯುವಕರು ಟೊಂಕ ಕಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಎಲ್ಲಾ ವಲಯದಲ್ಲಿ ಯುವಕರು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶದ ಅರ್ಥವ್ಯವಸ್ಥೆ ಸದೃಢವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಕಾಲದಲ್ಲಿ ಇಡೀ ದೇಶ ಒಂದಾಗಿ ಹೋರಾಡಿದೆ. ಆದರೆ ರಾಜಕೀಯವಾಗಿ ಮಾತ್ರ ಕೆಲವರು ಈ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ದೇಶ ಅವರ ಈ ಹುನ್ನಾರವನ್ನು ಸ್ಪಷ್ಟವಾಗಿ ಅರಿತಿದ್ದಲ್ಲದೇ, ಅದಕ್ಕೆ ಬಹುದೊಡ್ಡ ಪೆಟ್ಟನ್ನೂ ನೀಡಿತು ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
