ಮೈಸೂರು, ಅ.1- ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಭಾರೀ ಸಂಚಲನ ಮೂಡಿಸಿದೆ. ಅಭಿಯಾನ ಬೆಂಬಲಿಸಿ ಟಿ-ಶರ್ಟ್ ಧರಿಸಿ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಹುಲ್ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆಯಲ್ಲಿ ವಿಜಯಪುರದ ಯುವ ಕಾಂಗ್ರೆಸ್ ಕಾರ್ಯಕರ್ತ ಅಕ್ಷಯ್ ಪೇ ಸಿಎಂ ಕೋಡ್ ಇದ್ದ ಟಿ ಶರ್ಟ್ ಧರಿಸಿದ್ದ, ಕಾಂಗ್ರೆಸ್ ಪಕ್ಷ ನೀಡಿದ್ದ ಪೇ ಸಿಎಂ ಧ್ವಜ ಇರುವ ಕೋಲನ್ನು ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ.
ಇದನ್ನು ಗಮನಿಸಿದ ಪೊಲೀಸರು ಭಾರೀ ಸಂಖ್ಯೆಯಲ್ಲಿ ಕಳಲೆ ಗೇಟ್ ಬಳಿ ಆತನನ್ನು ಸುತ್ತುವರೆದು ತಮ್ಮ ವಶಕ್ಕೆ ತೆಗೆದುಕೊಂಡಿರುವುದಲ್ಲದೆ ಟಿ ಶರ್ಟ್ ಕಿತ್ತು ಹಾಕಿದ್ದಾರೆ. ಎಎಸ್ಐ ಒಬ್ಬರು ಹಿಂದಿನಿಂದ ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ವಲ್ಪ ದೂರದಲ್ಲೇ ರಾಹುಲ್ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಹೆಜ್ಜೆ ಹಾಕುತ್ತಿದ್ದರು.
ಪೊಲೀಸರು ಅಕ್ಷಯ್ನನ್ನು ವಶಕ್ಕೆ ಪಡೆದು ಥಳಿಸಿ ಕರೆದುಕೊಂಡು ಹೋಗುವಾಗ ಇತರ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿದ್ದರು. ಪೇ ಸಿಎಂ ಅಭಿಯಾನದ ಆರಂಭದಲ್ಲಿ ಬೆಂಗಳೂರಿನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದಾಗ ರಾಜ್ಯದ ನಾಯಕರು ಬೀದಿಗಿಳಿದು ಪ್ರತಿಭಟಿಸಿ ತಾವು ಫೋಸ್ಟರ್ ಅಂಟಿಸಿದ್ದನ್ನು ಹೊರತು ಪಡಿಸಿದರೆ ಮತ್ತೆ ಅತ್ತ ಗಮನ ಹರಿಸಿಲ್ಲ.
ಈಗಲೂ ಪಕ್ಷದ ಅಣತಿಯಂತೆ ಜಿಲ್ಲಾ ಕೇಂದ್ರಗಳಲ್ಲಿ ಪೇ ಸಿಎಂ ಆಭಿಯಾನ ಚಾಲ್ತಿಯಲ್ಲಿದೆ. ಪೊಲೀಸರು ಕಾರ್ಯಕರ್ತರನ್ನು ಬಂಧಿಸುವುದು ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಆದರೆ ಹಿರಿಯ ನಾಯಕರು ಅತ್ತ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಎಂಬಂತೆ ಇದ್ದಾರೆ. ಪಕ್ಷದ ಆದೇಶ ಪಾಲಿಸಲು ಹೋಗಿ ಕಾರ್ಯಕರ್ತರು ತೊಂದರೆಗೆ ಸಿಲುಕುತ್ತಿದ್ದಾರೆ ಎಂಬ ಅಸಮದಾನಗಳು ವ್ಯಾಕಪವಾಗಿವೆ.
ಇಂದು ಘಟಾನುಘಟಿ ನಾಯಕರ ಎದುರೇ ಪೊಲೀಸರು ಅಕ್ಷಯ್ ಮೇಲೆ ಹಲ್ಲೆ ನಡೆಸಿ ಟಿ ಶರ್ಟ್ ಕಿತ್ತು ಹಾಕಿ ಅರೆ ಬೆತ್ತಲೆ ಮೆರವಣಿಗೆ ಮಾಡಿದಾಗ ಯಾವ ನಾಯಕರು ಆತನ ರಕ್ಷಣೆಗೆ ಬಾರದಿದ್ದದ್ದು ಕಾರ್ಯಕರ್ತರ ಅಸಮದಾನವನ್ನು ಮತ್ತಷ್ಟು ಹೆಚ್ಚಿಸಿದೆ.