ಬೆಂಗಳೂರು,ಆ.1- ಸರಣಿ ಕಗ್ಗೊಲೆಯಿಂದಾಗಿ ಪಕ್ಷದ ವಿರುದ್ದವೇ ಕಾರ್ಯಕರ್ತರು ತಿರುಗಿಬಿದ್ದರಿವುದ ರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಕೊನೆಗೂ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ.
ಡಿ.ಜೆ.ಹಳ್ಳಿ ಯಿಂದ ಹಿಡಿದು ಪುತ್ತೂರಿನಲ್ಲಿ ಬಿಜೆಪಿ ಯುವ ನಾಯಕ ಸಂತೋಷ್ ನಟ್ಟಾರ್ ಕೊಲೆ ಪ್ರಕರಣ ಸೇರಿದಂತೆ ಹಲವು ಗಲಭೆಗಳು ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿವೆ ಎಂಬ ಆರೋಪದ ಮೇಲೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ವಿಷಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಪ್ರವಾದಿ ಮಹಮ್ಮದರ ಕುರಿತ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂಬ ಕಾರಣ ಮುಂದಿಟ್ಟು ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಹಿಂಸಾಚಾರ ನಡೆದಿತ್ತು. ಇದಕ್ಕೆ ಸಂಬಂಧಿಸಿ ಎಸ್ಡಿಪಿಐ ಕೆಲವು ಪ್ರಮುಖರನ್ನು ಬಂಧಿಸಲಾಗಿದೆ. ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸಚಿವರು ಒತ್ತಡ ಹಾಕಿದ್ದರಲ್ಲದೆ, ಸಂಘಪರಿವಾರದ ಮುಖಂಡರೂ ಕೂಡ ಈ ಎರಡು ಸಂಘಟನೆಗಳನ್ನು ನಿಷೇಧ ಮಾಡದಿದ್ದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆತ್ತಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದರು.
ಒಂದು ಕಡೆ ಸ್ವಪಕ್ಷೀಯರು , ಮತ್ತೊಂದು ಕಡೆ ಸಂಘಪರಿವಾರದ ಒತ್ತಡಕ್ಕೆ ಸಿಲುಕಿರುವ ಅನಿವಾರ್ಯವಾಗಿ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆ ಹಾಗೂ ರ್ನಿಷ್ಟ ಸಂಘಟನೆಯ ಕಾರ್ಯಕರ್ತರ ಹತ್ಯೆ, ವಿಶ್ವದ ಅಪಾಯಕಾರಿ ಭಯೋತ್ಪಾದಕ ಸಂಘಟನೆ, ಐಸಿಸ್ ಉಗ್ರರ ಜೊತೆ ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಇವುಗಳ ನಿಷೇಧಕ್ಕೆ ಮುಂದಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ನಡೆದ ಹಿಂಸಾಚಾರದಲ್ಲಿ ವಿವಾದಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡದ ಶಂಕೆ ವ್ಯಕ್ತವಾಗಿರುವಾಗಲೇ, ದೇಶವ್ಯಾಪಿ ಸಂಘಟನೆಯನ್ನು ನಿಷೇಧ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಲವು ರಾಜ್ಯಗಳಲ್ಲಿ ಈಗಾಗಲೇ ಪಿಎಫ್ಐಗೆ ನಿಷೇಧ ಹೇರಲಾಗಿದೆಯಾದರೂ, ದೇಶವ್ಯಾಪಿ ನಿಷೇಧ ಜಾರಿಯಾದರೆ ಸಂಘಟನೆಯ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ. ಇತ್ತೀಚೆಗೆ ಗೋವಾ ಗುಜರಾತ್ ರಾಜಸ್ಥಾನ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮಬಂಗಾಳದಲ್ಲಿ ( ಹಿಂಸಾಚಾರ ನಡೆದಿತ್ತು. ಈ ವೇಳೆ ಮಧ್ಯಪ್ರದೇಶದ ಖರ್ಗೋನ್ನಲ್ಲಿ ನಡೆದ ಹಿಂಸಾಚಾರದಲ್ಲಿ ಪಿಎಫ್ಐ ಕೈವಾಡವಿತ್ತು ಎಂಬ ಆರೋಪ ಕೇಳಿ ಬಂದಿತ್ತು.ಪಿಎಫ್ಐ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು.
ಕೇರಳದ ಕಣ್ಣನೂರು, ಕಾಸರಗೋಡು, ತಿರುವನಂತಪುರಂ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಶಿವಮೊಗ್ಗ , ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಈ ಸಂಘಟನೆ ಕೋಮುಗಲಭೆ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ವರದಿ ನೀಡಲಾಗಿತ್ತು.
ಈ ಹಿಂದೆ ನಿಷೇಧಕ್ಕೊಳಪಟ್ಟಿದ್ದ ಸಿಮಿ ಸಂಘಟನೆಯ ಪ್ರತಿರೂಪದಂತಿರುವ ಎಸ್ಎಫ್ಐ ಹಾಗೂ ಎಸ್ ಡಿಪಿಐ ಮೂಲಭೂತ ಸಂಘಟನೆಯಾಗಿದ್ದು, ಮುಂದೊಂದು ದಿನ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಬಹುದು ಎಂದು ಎನ್ಐಎ ವರದಿಯಲ್ಲಿ ಉಲ್ಲೇಖ ಮಾಡಿತ್ತು.
ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಕೆಲವು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ಜೊತೆ ಪಿಎಫ್ಐ ಕೈ ಜೋಡಿಸಿರುವ ಸಾಧ್ಯತೆ ಇದೆ. ಕೆಲವು ಕುಖ್ಯಾತ ಭಯೋತ್ಪಾದಕರಿಗೆ ಈ ಸಂಘಟನೆಗಳ ಸದಸ್ಯರು ಸಾಥ್ ನೀಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿತ್ತು.
ಈ ಆರೋಪಗಳ ಜೊತೆಗೆ ಹಿಂದಿನಿಂದಲೂ ಪಿಎಫ್ಐ ವಿರುದ್ಧ ದೇಶದ್ರೋಹ, ಉಗ್ರವಾದಕ್ಕೆ ಬೆಂಬಲ ನೀಡಿದ ಆರೋಪಗಳಿವೆ. ಸ್ವತಃ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೂಡಾ ಬೆಂಗಳೂರು ಸರಣಿ ಸ್ಫೋಟ, ಕೇರಳದಲ್ಲಿ ಸಂಘ ಪರಿವಾರದ ಕಾರ್ಯಕರ್ತನ ಕೈಕಡಿದ ಕೇಸ್, ಕೇರಳದ ಲವ್ ಜಿಹಾದ್ನಲ್ಲಿ ಪಿಎಫ್ಐ ಮತ್ತು ಅದರ ರಾಜಕೀಯ ಮುಖವಾಣಿ ಎಸ್ಡಿಪಿಐನ ಪಾತ್ರವಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.
ಹೀಗಾಗಿ ಇದೀಗ ದೇಶವ್ಯಾಪಿ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮುಂದಿನ ವಾರ ಈ ಕುರಿತು ಅಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಆರೆಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಬಂಧನಕ್ಕೊಳಪಟ್ಟ ಕಾರ್ಯಕರ್ತರು ಇದೇ ಸಂಘಟನೆಗೆ ಸೇರಿದ್ದವರು.
1993ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಸಂಘಟನೆ ಆರಂಭವಾಗಿತ್ತು. ಇದೊಂದು ಇಸ್ಲಾಮಿಕ್ ಸಂಘಟನೆಯಾಗಿದ್ದು, ನಿಷೇಧಿತ ಇಸ್ಲಾಮಿಕ್ ವಿದ್ಯಾರ್ಥಿ ಉಗ್ರ ಸಂಘಟನೆಯಾದ ಸಿಮಿ ಜೊತೆ ನಂಟು ಹೊಂದಿದೆ ಎಂದು ಗುಪ್ತಚರ ಸಂಸ್ಥೆಗಳು ಇದರ ಬಗ್ಗೆ ಪ್ರಾರಂಭಿಕ ದಾಖಲೆಗಳನ್ನು ಸಂಗ್ರಹಿಸಿದ್ದವು.
2006ರಲ್ಲಿ ಕರ್ನಾಟಕದ ಕೆಎಫ್ಡಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್ಐ ಎಂಬ ಅಧಿಕೃತ ಹೆಸರಿನಲ್ಲಿ ಸಂಘಟನೆ ಸ್ಥಾಪನೆಗೊಂಡಿತ್ತು. 2017ರಲ್ಲಿ ಎನ್ಐಎ ಸಿದ್ಧಪಡಿಸಿದ ಪರಿಷ್ಕೃತ ವರದಿಯಲ್ಲಿ, ಹಲವು ಭಯೋತ್ಪಾದನಾ ಪ್ರಕರಣಗಳ ಜೊತೆ ಸಂಘಟನೆಗೆ ನಂಟು ಇರುವ ವಿಷಯ ಪ್ರಸ್ತಾಪಿಸಿತ್ತು.ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿಮಿ ಸಂಘಟನೆಗೆ ನಿಷೇಧ ಹೇರಿದ್ದರು.