ನವದೆಹಲಿ, ಜ.19- ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಾಗಿ ಮತಪತ್ರಗಳನ್ನು ಬಳಸಿದರೆ ಉತ್ತಮ ಎಂದು ವಾದಿಸಿ ಹಿರಿಯ ವಕೀಲ ಎಂ.ಎಲ್.ಶರ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲು ಅಂಗೀಕರಿಸಿದೆ.
ವಿದ್ಯುನ್ಮಾನ ಮತಯಂತ್ರಗಳನ್ನು ಪರಿಚಯಿಸಲು ದಾರಿ ಮಾಡಿಕೊಟ್ಟಿದ್ದ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 61ಎನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಶರ್ಮಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮನವಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ನ್ಯಾಯಪೀಠವು ವಕೀಲ ಎಂ.ಎಲ್.ಶರ್ಮ ಅವರು ವೈಯಕ್ತಿಕವಾಗಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ಈ ಪ್ರಕರಣವನ್ನು ಕಲಾಪಗಳ ಪಟ್ಟಿಯಲ್ಲಿ ಸೇರಿಸುವುದಾಗಿ ಹೇಳಿತು.
ಶರ್ಮಾ ಅವರು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 61ಎ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಅನುಮತಿಸಿದ್ದರೂ ಇದನ್ನು ಸಂಸತ್ನಲ್ಲಿ ಅಂಗೀಕರಿಸಿಲ್ಲವಾದ್ದರಿಂದ ಕಡ್ಡಾಯವಾಗಿ ಇದನ್ನು ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠದ ಮುಂದೆ ಹೇಳಿದ್ದರು.
ಭಾರತೀಯ ಚುನಾವಣಾ ಆಯೋಗವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತಪತ್ರಗಳ ಬದಲಾಗಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಅನುಷ್ಠಾನಕ್ಕೆ ತಂದಿದೆ. ಈಗಾಗಲೇ ಹಲವು ಚುನಾವಣೆಗಳು ಈ ವಿದ್ಯುನ್ಮಾನ ಮತಯಂತ್ರಗಳ ಮೂಲಕವೇ ನಡೆದಿವೆ. ಹಲವು ರಾಜಕೀಯ ನಾಯಕರು ಮತ್ತು ಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿನಂತೆ ಮತಪತ್ರ ಬಳಕೆಯನ್ನೇ ಜಾರಿಗೆ ತರಬೇಕೆಂದು ಒತ್ತಾಯ ಕೂಡ ಮಾಡಿದ್ದವು.
ಪಂಚರಾಜ್ಯ ಚುನಾವಣೆ ನಡೆಯುವ ಸಂದರ್ಭದಲ್ಲೇ ಈ ಮತಪತ್ರದ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುತ್ತಿದ್ದಾಗ ಮತ ಎಣಿಕೆ ಮತ್ತು ಫಲಿತಾಂಶ ನೀಡಿಕೆ ವಿಳಂಬವಾಗುತ್ತಿತ್ತು. ಅಸಿಂಧು ಮತಗಳ ಪ್ರಮಾಣವೂ ಕಂಡುಬರುತ್ತಿತ್ತು.
ಆದರೆ, ವಿದ್ಯುನ್ಮಾನ ಮತಯಂತ್ರ ಬಳಕೆಯಾದ ಮೇಲೆ ಅಸಿಂಧು ಮತಗಳಿಗೆ ಅವಕಾಶವಿಲ್ಲ. ಶೀಘ್ರವೇ ಮತ ಎಣಿಕೆ ಮತ್ತು ಫಲಿತಾಂಶ ನೀಡಬಹುದಾಗಿದೆ. ಅಲ್ಲದೆ, ಕಣದಲ್ಲಿರುವ ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ಮತದಾರರು ನೋಟಾ ಚಲಾಯಿಸುವ ಅವಕಾಶ ಕೂಡ ಮತಯಂತ್ರದಲ್ಲಿ ಮಾಡಿಕೊಡಲಾಗಿದೆ.
