ಬೆಂಗಳೂರು,ಮಾ.11- ಬಡವರ ಹಣವನ್ನು ಲೂಟಿ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದ ಕಾಂಗ್ರೆಸ್ಗೆ ಜನಸಾಮಾನ್ಯರ ಕಷ್ಟಗಳ ಪರಿಚಯವೇ ಇರಲಿಲ್ಲ. ಈಗ ನಮ್ಮ ಡಬ್ಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿಯ ಯೋಜನೆಗಳಿಂದ ಹತಾಶವಾಗಿರುವ ಆ ಪಕ್ಷ ನನ್ನ ಅಂತ್ಯವನ್ನು ಬಯಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮದ್ದೂರಿನ ಗೆಜ್ಜಲಗೆರೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಬೆಂಗಳೂರು-ಮೈಸೂರು ನಡುವಿನ ವೇಗವರ್ಧಕ ದಶಪಥ ಹೆದ್ಧಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು, ತಾಯಿ ಭುವನೇಶ್ವರಿಗೂ ನಮಸ್ಕಾರಗಳು, ಆದಿಚುಂಚನಗಿರಿ ಮತ್ತು ಮೇಲುಕೋಟೆ ಗುರುಗಳಿಗೆ ನಮನ ಸಲ್ಲಿಸಿ ಆಶೀರ್ವಾದ ಬೇಡುತ್ತೇನೆ ಎಂದು ಭಾಷಣ ಆರಂಭಿಸಿದರು.
ರಾಜ್ಯದ ಹಲವು ಕಡೆ ಜನತಾದರ್ಶನ ಪಡೆಯುವ ಅವಕಾಶ ನನಗೆ ಸಿಕ್ಕಿದೆ. ಅದರಲ್ಲೂ ಸಕ್ಕರೆ ನಗರ ಮಂಡ್ಯದ ಜನರ ಆಧರಣೆ ಕಂಡು ಪುಳಕಿತನಾಗಿದ್ದೇನೆ. ಡಬ್ಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ವೇಗವಾಗಿ ಕೈಗೆತ್ತಿಕೊಳ್ಳುತ್ತಿದೆ.ಇಂದು ಸಾವಿರಾರು ಕೋಟಿ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕು ಸ್ಥಾಪನೆ ಮಾಡಲಾಗಿದೆ ಎಂದರು.
ದಶಪಥ ಹೆದ್ಧಾರಿ ಯೋಜನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಫೆÇೀಟೋಗಳು ವೈರಲ್ ಆಗಿವೆ. ಈ ರಸ್ತೆಯ ಗುಣಮಟ್ಟ ಕಂಡು ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಗರ್ವ ಮೂಡಿದೆ ಎಂದು ಹೇಳಿದರು.
ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವ ಅರ್ಧದಷ್ಟು ಕಡಿಮೆಯಾಗಿದೆ. ಮೈಸೂರು-ಕುಶಾಲನಗರ ನಡುವಿನ ರಸ್ತೆ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಎಲ್ಲಾ ಯೋಜನೆಗಳು ಅಭಿವೃದ್ಧಿಗೆ ವೇಗ ನೀಡಲಿದೆ. ಸಮೃದ್ಧಿಯ ರಹದಾರಿಯನ್ನು ತೆರೆಯುತ್ತದೆ ಎಂದು ಬಣ್ಣಿಸಿದರು.
ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರು ದೇಶದಲ್ಲಿ ಮೂಲಸೌಲಭ್ಯಗಳ ದಿಕ್ಕನ್ನೆ ಬದಲಾಯಿಸಿದರು. ಸವಾಲನ್ನು ಅವಕಾಶವನ್ನಾಗಿ ಬದಲಾಯಿಸಿದರು. ಅವರು ಇದೇ ನಾಡಿನವರು ಎಂಬದೂ ಪೂರ್ವ ಜನ್ಮದ ಸುಕೃತವಾಗಿದೆ ಎಂದರು.
ಭಾರತ್ ಮಾಲ, ಸಾಗರ್ ಮಾಲ ಯೋಜನೆಗಳಿಂದ ದೇಶ ಬದಲಾಗುತ್ತಿದೆ. ಪ್ರಸಕ್ತ ಬಜೆಟ್ನಲ್ಲಿ ನಾವು 10 ಲಕ್ಷ ಕೋಟಿ ರೂ.ಗಳನ್ನು ಮೂಲ ಸೌಲಭ್ಯಕ್ಕಾಗಿ ಮೀಸಲಿರಿಸಿದ್ದೇವೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹೆದ್ಧಾರಿ ಯೋಜನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ಹೆದ್ದಾರಿ ಕೆಲವರ ಪಾಲಿನ ಎಟಿಎಂ : ಹೆಚ್ಡಿಕೆ
ಈ ಹೆದ್ಧಾರಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಭಾಗದಲ್ಲಿ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿದೆ. ರಾಮನಗರ, ಮಂಡ್ಯ ಭಾಗಕ್ಕೂ ಲಾಭವಾಗಿದೆ. ಮೈಸೂರಿಗೆ ಪ್ರಯಾಣ ಸುಲಭವಾಗಿದೆ ಎಂದರು.
ಕಾವೇರಿಯ ಜನ್ಮಸ್ಥಳ ಕೊಡಗಿಗೆ ಪ್ರಯಾಣ ಸುಧಾರಣೆಯಾಗಿದೆ. ಪಶ್ಚಿಮಘಟ್ಟ ಭಾಗದ ಮಾರ್ಗದಲ್ಲಿ ಮಳೆಗಾಲದಲ್ಲಿ ಭೂ ಕುಸಿತಗಳು ಕಂಡುಬರುತ್ತಿದ್ದವು. ಬಂದರನ್ನು ಸಂಪರ್ಕಿಸುವ ಈ ಮಾರ್ಗ ಹಲವು ಸವಾಲುಗಳನ್ನು ಹೆದರಿಸುತ್ತಿತ್ತು. ಬೆಂಗಳೂರು ಮೈಸೂರು-ಕುಶಾಲ ನಗರ ಹೆದ್ಧಾರಿ ಸುಧಾರಣೆಯಿಂದ ಎಲ್ಲಾ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ಏನು ಕೆಲಸ ಮಾಡಲಿಲ್ಲ. ಬಡವರ ಅಭಿವೃದ್ಧಿಗಿದ್ದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ.. ಈಗ ದೊಡ್ಡ ಮಾತುಗಳನ್ನು ಆಡುತ್ತಾರೆ. ಆ ಪಕ್ಷಕ್ಕೆ ಬಡವರ ಕಷ್ಟಗಳ ಪರಿಚಯವೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿ ಬಡವರ ಕಷ್ಟಗಳನ್ನು ಕಡಿಮೆ ಮಾಡಲು ಅವಿರತ ಪ್ರಯತ್ನ ಮಾಡಿದ್ದೇವೆ. ಬಡವರಿಗೆ ಸ್ವಂತ ಮನೆ, ನಲ್ಲಿ ನೀರಿನ ಸಂಪರ್ಕ, ಉಜ್ವಲಾದ ಅಡುಗೆ ಅನಿಲ ಸಂಪರ್ಕ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಸಮರ್ಥಿಸಿಕೊಂಡರು.
ಬಡವರಿಗಾಗಿಯೇ ಯೋಜನೆಗಳನ್ನು ರೂಪಿಸಲಾಗಿದೆ, ಅವುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಯೋಜನೆಗಳ ಲಾಭ ಜನರಿಗೆ ತಲುಪಿಸುವ ಪ್ರಯತ್ನವನ್ನು ಅಭಿಯಾನದ ಮಾದರಿಯಲ್ಲಿ ನಡೆಸಬೇಕು ಎಂದರು.
ಭದ್ರಮೇಲ್ಡಂಡೆ ಯೋಜನೆಗೆ 5300 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಈ ಮೂಲಕ ನೀರಾವರಿಗೆ ಆದ್ಯತೆ ನೀಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಯೋಜನೆಗಳನ್ನು ಚುರುಕುಗೊಳಿಸಲಾಗಿದೆ. ರೈತರ ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ಕೃಷಿಕ್ ಸನ್ಮಾನ್ ಯೋಜನೆಯಡಿ 12 ಸಾವಿರ ಕೋಟಿಗಳನ್ನು ನೇರವಾಗಿ ಖಾತೆಗಳಿಗೆ ತಲುಪಿಸಲಾಗಿದೆ. ಮಂಡ್ಯ ಜಿಲ್ಲೆಯ ರೈತರಿಗೂ ಮೂರು ಮುಕ್ಕಾಲು ಲಕ್ಷ ಕೋಟಿ ರೂಪಾಯಿಗಳನ್ನು ಆರನೂರು ಕೋಟಿಗೂ ಅಕ ಹಣವನ್ನು ನೀಡಲಾಗಿದೆ ಎಂದು ಹೇಳಿದರು.
ಸಕ್ಕರೆ ನಗರ ಮದ್ಧೂರು ಮಂಡ್ಯ ಕಬ್ಬು ಬೆಳೆಗಾರರು ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಕ್ಕರೆ ಬೆಲೆ ಹೆಚ್ಚಾಗಲಿ, ಕಡಿಮೆಯಾಗಲಿ ರೈತರಿಗೆ ಸಮಸ್ಯೆಯಾಗುತ್ತಿತ್ತು. ಅದನ್ನು ಬಗೆಹರಿಸಲು ಕೇಂದ್ರ ಸರ್ಕಾರ ಎಥೆನಾಲ್ ಉತ್ಪಾದನೆ ಸೇರಿದಂತೆ ಉಪ ಉತ್ಪನ್ನಗಳಿಗೆ ಆದ್ಯತೆ ನೀಡಿದೆ. ಕಳೆದ ವರ್ಷ ದೇಶದ ಸಕ್ಕರೆ ಕಾರ್ಖಾನೆಗಳಿಂದ ತೈಲ ಕಂಪನಿಗಳು 20 ಸಾವಿರ ಕೋಟಿ ರೂ. ಮೌಲ್ಯದ ಎಥಿನಾಲ್ ಖರೀದಿಸಿವೆ. ಕಳೆದ 9 ವರ್ಷಗಳಿಂದ 70 ಸಾವಿರ ಕೋಟಿ ರೂ. ಮೊತ್ತದ ಎಥೆನಾಲ್ ಖರೀದಿಸಲಾಗಿದ್ದು, ಈ ಹಣ ರೈತರಿಗೆ ತಲುಪಿದೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕಬ್ಬು ಬೆಳೆಗಾರರಿಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಲಿದೆ. 10 ಸಾವಿರ ಕೋಟಿ ರೂಪಾಯಿ ಸಹಾಯ ಧನ, ತೆರಿಗೆ ರಿಯಾಯ್ತಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೋದಿ ರೋಡ್ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು
ಡಬಲ್ ಇಂಜಿನ್ ಸರ್ಕಾರದ ಈ ಸಾಧನೆಯಿಂದ ಕಾಂಗ್ರೆಸ್ ಹತಾಶೆಗೊಂಡಿದೆ. ಮೋದಿ ಬೆಂಗಳೂರು-ಮೈಸೂರು ಹೆದ್ಧಾರಿ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣದಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಮೋದಿ ಸಮಾದಿ ಮಾಡುವ ಕನಸ್ಸು ಕಾಣುತ್ತಿದೆ. ದೇಶದ ಜನರ ಆಶೀರ್ವಾದವೇ ನನಗೆ ದೊಡ್ಡ ರಕ್ಷಾ ಕವಚವಾಗಿದೆ. ಮೋದಿ ಸಮಾದಿ ತೋಡುವ ಕಾಂಗ್ರೆಸ್ ಕನಸ್ಸು ನನಸಾಗುವುದಿಲ್ಲ. ಡಬ್ಬಲ್ ಇಂಜಿನ್ ಸರ್ಕಾರಕ್ಕಾಗಿ ಮುಂದಿನ ದಿನಗಳಲ್ಲೂ ನಿಮ್ಮ ಬೆಂಬಲ ಬೇಕಿದೆ ಎಂದು ಮನವಿ ಮಾಡಿದರು.
ಇದೇ ವೇಳೆ ಯೋಜನೆ ಹಿನ್ನೆಲೆ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ಮೈಸೂರು-ಕುಶಾಲನಗರ ನಡುವಿನ ನಾಲ್ಕು ಪಥಗಳ ಹೆದ್ಧಾರಿ ಅಭಿವೃದ್ಧಿ ಯೋಜನೆಗೂ ಪ್ರಧಾನಿ ಚಾಲನೆ ನೀಡಿದರು. ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಫಲಾನುಭವಿಗಳ ಸಮಾವೇಶವೂ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತೀನ್ ಗಡ್ಕರಿ, ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
PM Modi, Mandya, Congress, development,