ನವದೆಹಲಿ, ಜ.31- ಚುನಾವಣಾ ನಡೆಯುತ್ತಿರುವುದರಿಂದ, ಈ ಹಂತದಲ್ಲಿ ರಾಜಕೀಯ ಮಾಡದೆ ಸಂಸತ್ನಿಲ್ಲಿ ಗುಣಮಟ್ಟದ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸಂಪ್ರದಾಯದಂತೆ ಇಂದು ಅಧಿವೇಶನದಲ್ಲಿ ಭಾಗವಹಿಸುವ ಮುನ್ನಾ ಸಂಸತ್ನಧ ಹೊರಗೆ ಸುದ್ದಿಗಾರರೊಂದಿಗೆ ಚುಟುಕಾಗಿ ಮಾತನಾಡಿದ ಪ್ರಧಾನಿ ಅವರು, ಚುನಾವಣೆಗಳು ಕಾಲ ಕಾಲಕ್ಕೆ ನಡೆಯುತ್ತಲೇ ಇರುತ್ತವೆ.
ಆದರೆ ಬಜೆಟ್ಇಡೀ ವರ್ಷ ದೇಶದ ಅಭಿವೃದ್ಧಿಯ ನೀಲ ನಕ್ಷೆಯನ್ನು ತಯಾರಿಸುತ್ತದೆ. ಸಂಸತ್ ನಲ್ಲಿ ನಡೆಯುವ ಮುಕ್ತ ಮನಸ್ಸಿನಿಂದ ಒಳ್ಳೆಯ ಚರ್ಚೆಗಳು ಜಾಗತಿಕವಾಗಿ ಪರಿಣಾಮ ಬೀರಲಿವೆ. ಬಹುಮುಖ್ಯ ಅವಕಾಶಗಳನ್ನು ಒದಗಿಸಲಿವೆ ಎಂದು ಹೇಳಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು, ಅದರ ಸಂಸದರು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆಯಲ್ಲಿ ಭಾಗವಹಿಸಬೇಕು. ಪ್ರಸ್ತುತ ಜಾಗತಿಕ ಬೆಳವಣಿಗೆಗಳು ಮತ್ತು ಕೋವಿಡ್ ಭಾರತಕ್ಕೆ ಬಹಳಷ್ಟು ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿವೆ. ಅಧಿವೇಶನ ಭಾರತದ ಆರ್ಥಿಕ ಪ್ರಗತಿಯ ವಿಶ್ವಾಸವನ್ನು, ಭಾರತದಲ್ಲಿ ಉತ್ಪಾದನೆಯಾದ ಲಸಿಕೆಗಳು ಮತ್ತು ಲಸಿಕಾ ಅಭಿಯಾನದ ಮೇಲಿನ ನಂಬಿಕೆಯನ್ನು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆಗಳ ಮೇಲೆ ಸಂಸತ್ ಕಲಾಪ ಪರಿಣಾಮ ಬೀರಲಿದೆ. ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಬಜೆಟ್ ದೇಶದ ಅಭಿವೃದ್ಧಿಯ ನೀಲ ನಕ್ಷೆಯನ್ನು ರೂಪಿಸುತ್ತದೆ. ದೇಶವನ್ನು ಆರ್ಥಿಕ ಶೃಂಗದತ್ತ ಕರೆದೊಯ್ಯಲು ಫಲಪ್ರದ ಚರ್ಚೆಗಳು ನಡೆಯಲಿವೆ. ವರ್ಷ ಪೂರ್ತಿ ಒಳ್ಳೆಯ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಾವು ಆಶಾವಾದಿಯಾಗಿರುವುದಾಗಿ ಮೋದಿ ಹೇಳಿದರು.
