ಮಲ್ಲಾಪುರಂ(ಕೇರಳ),ಸೆ.28 – ಉತ್ತರಾಖಂಡದಲ್ಲಿ 19 ವರ್ಷದ ಯುವತಿ ಹತ್ಯೆ ಮತ್ತು ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆ ಕುರಿತು ಕೇಂದ್ರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೆಣ್ಣು ಮಕ್ಕಳನ್ನ ರಕ್ಷಿಸಿ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಅವರ ಪಕ್ಷ ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯ ವಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಬೇಟಿ ಬಚಾವೋ ಎಂದರೆ, ಬಿಜೆಪಿ ಕಾರ್ಯಕರ್ತರು ಅತ್ಯಾಚಾರಿಗಳೇ ಬಚಾವೋ ಎನ್ನುತ್ತಾರೆ. ಪ್ರಧಾನಿಯವರ ಪರಂಪರೆ ಭಾಷಣಗಳು – ಸುಳ್ಳು ಮತ್ತು ಪೊಳ್ಳು ಭಾಷಣಗಳು. ಅವರ ಆಡಳಿತ ಅಪರಾಧಿಗಳಿಗೆ ಮೀಸಲಾಗಿದೆ. ಈಗ ಭಾರತ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.
ಬಿಜೆಪಿ ಮುಖಂಡರೊಬ್ಬರ ಪುತ್ರನ ಮಾಲೀಕತ್ವದ ರೆಸಾರ್ಟ್ನಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ(19) ನಾಪತ್ತೆಯಾದ ಕೆಲವೇ ದಿನಗಳಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಹತ್ಯೆಗಾಗಿ ಬಿಜೆಪಿ ನಾಯಕನ ಮಗನನ್ನು ಬಂಧಿಸಲಾಗಿದೆ. ಆಗಸ್ಟ್ನಲ್ಲಿ, ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ಅಪರಾಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್, ಪ್ರಧಾನಿ ಬೇಟಿ ಬಚಾವೋ ಎಂದು ಹೇಳುತ್ತಾರೆ, ಆದರೆ ಅವರ ಪಕ್ಷ ಮತ್ತು ಕಾರ್ಯಕರ್ತರು ಅತ್ಯಾಚಾರಿಗಳು ಬಚಾವ್ ಎನ್ನುತ್ತಾರೆ ಎಂದು ಟೀಕಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿದ್ದು, ಗಾಂಧಿಯವರ ಆಲೋಚನೆಗಳನ್ನು ಪ್ರತಿಧ್ವನಿಸುತ್ತಾ, ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ 20ನೇ ದಿನವನ್ನು ಹೆಣ್ಣು ಮಕ್ಕಳು ಮತ್ತು ಯುವತಿಯರ ಮೇಲಿನ ನಿರಂತರ ದೌರ್ಜನ್ಯಗಳ ಸಮಸ್ಯೆಗಾಗಿ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆಯಲ್ಲಿ ಪಾದಯಾತ್ರಿಗಳು ಇಟ್ಟ ಪ್ರತಿ ಹೆಜ್ಜೆಯು ಹುಡುಗಿಯರು ಮತ್ತು ಯುವತಿಯರ ಮೇಲಿನ ನಿರಂತರ ದೌರ್ಜನ್ಯದ ವಿಷಯಕ್ಕೆ ಸಮರ್ಪಿತವಾಗಿದೆ. ಉತ್ತರಾಖಂಡದಲ್ಲಿ ಅಂಕಿತಾ ಅವರ ಭಯಾನಕ ಪ್ರಕರಣ ಇತ್ತೀಚಿನದು. ಈ ಹಿಂದೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ನ್ಯಾಯದ ಅಪಹಾಸ್ಯ ನಡೆದಿತ್ತು ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕನ ಮಗ ಭಾರತದ ಮಗಳ ಹತ್ಯೆಯನ್ನು ಸಹಿಸಲಾಗದು ಮತ್ತು ಸ್ವೀಕಾರಾರ್ಹವಲ್ಲ. ನಾವು ಭಾರತ್ ಜೋಡೊ ಯಾತ್ರೆ ಮೂಲಕ ಅಂಕಿತಾ ಅವರಿಗೆ ನ್ಯಾಯಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರು, ಇಂದು ಕೇರಳದ ಮಲಪ್ಪುರಂನಿಂದ ಭಾರತ್ ಜೋಡೋ ಯಾತ್ರೆ¿ಯ 20 ನೇ ದಿನವನ್ನು ಪುನರಾರಂಭಿಸಿದ್ದು, ರಾಹುಲ್ ಗಾಂಧಿ ಮತ್ತು ಇತರ ಪಕ್ಷದ ನಾಯಕರು ಭಾರತವನ್ನು ಒಗ್ಗೂಡಿಸಲು ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಿದ್ದು, ಇದು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು 12 ರಾಜ್ಯಗಳನ್ನು ಒಳಗೊಂಡಿದೆ.