ಬೆಂಗಳೂರು,ಸೆ.20- ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಈ ತಿದ್ದುಪಡಿ ಶಿಕ್ಷೆಯನ್ನು ಪ್ರಶ್ನಿಸುವ ಹಕ್ಕನ್ನೇ ಮೊಟಕುಗೊಳಿಸುವ ಹುನ್ನಾರವಾಗಿದೆ ಎಂದು ಪೊಲೀಸರಿಂದಲೇ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಅಂಚೆ ಮೂಲಕ ದೂರುಗಳ ಪತ್ರ ಬರುತ್ತಿವೆ.
ಕಿರಿಯ ಪೊಲೀಸರು ಭ್ರಷ್ಟ್ರಚಾರ ಆಥವಾ ಕಾನೂನುಬಾಹಿರ ಚಟುವಟಿಕೆ ತೊಡಗಿಸಿಕೊಳ್ಳುವುದು, ಶಿಸ್ತು ಉಲ್ಲಂಘಿಸುವುದು ಕಂಡುಬಂದರೆ ಪೊಲೀಸ್ ಶಿಸ್ತು ಪ್ರಾಧಿಕಾರ ವಿಧಿಸುವ ಶಿಕ್ಷೆಯೇ ಅಂತಿಮ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ತಿದ್ದುಪಡಿ ನಿಯಮದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಮೆಕ್ಸಿಕೋದಲ್ಲಿ ಭಾರೀ ಭೂಕಂಪ..!
ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನಗಳ ಕಾಲ ಗಡುವು ನೀಡಿದೆ. ಇದಕ್ಕೆ ಪೊಲೀಸ್ ಹಾಗೂ ಸಾರ್ವಜನಿಕ ವಲಯಗಳಿಂದ ವಿರೋಧ ವ್ಯಕ್ತವಾಗಿದೆ. ಮೇಲ್ಮನವಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಹತ್ತಾರು ಪತ್ರಗಳು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸ್ಪೀಡ್ ಫೋಸ್ಟ್ ಮೂಲಕ ಫೋಸ್ಟ್ ಮಾಡುತ್ತಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಿಳಿದೋ ತಿಳಿಯದೇ ಮಾಡುವ ತಪ್ಪಿಗೆ ಶಿಸ್ತು ಪ್ರಾಧಿಕಾರ ನೀಡುವ ಶಿಕ್ಷೆಯೇ ಅಂತಿಮ ಆಗಕೂಡದು. ಅಪರಾಧವೆಸಗುವ ಆರೋಪಿಗಳಿಗೆ ಕಾನೂನಿನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಆದರೆ ಕಾನೂನು ರಕ್ಷಕರಾದ ಪೊಲೀಸರಿಗೆ ಮೇಲ್ಮನವಿ ಅವಕಾಶವಿಲ್ಲದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.