ಬೆಂಗಳೂರು, ಜು.12- ಸಿದ್ದರಾಮೋತ್ಸವದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅವನತಿಯಾಗಲಿದೆ ಎಂಬ ಪ್ರಹ್ಲಾದ್ ಜೋಶಿಯವರ ಹೇಳಿಕೆಯನ್ನು ಟ್ವಿಟ್ಟರ್ ನಲ್ಲಿ ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ಖಾತೆ ಸಚಿವ ಪ್ರಹ್ಲಾದ್ ಜೋಷಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಪ್ರಹ್ಲಾದ ಜೋಷಿ ಅವರು ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ಮುಳುಗಿಸಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಳುಗಿಸಲು ಹೊರಟಿದ್ದಾರೆ. ಅವರಂತಹ ಹಿರಿಯ ನಾಯಕರು ಕೂಡ ಸಿದ್ದರಾಮಯ್ಯನವರಿಂದ ಬೇಸತ್ತಿದ್ದಾರೆ. ಹಾಗಾದಲ್ಲಿ ಕಾಂಗ್ರೆಸ್ ನಾಶವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ವ್ಯಾಖ್ಯಾನಿಸಿದ್ದರು.
ಜೋಷಿಯವರ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಡಿಯೂರಪ್ಪ ಹೆಸರು ಉಲ್ಲೇಖಿಸಿ ಟ್ವಿಟ್ಟರ್ನಲ್ಲಿ ಜೋಷಿ ಅವರನ್ನು ಟೀಕಿಸಿದ್ದರು. ಸಿದ್ದರಾಮಯ್ಯ ಟೀಕೆಗೆ ಟ್ವಿಟ್ಟರ್ನಲ್ಲೇ ಪ್ರತ್ಯುತ್ತರ ನೀಡಿರುವ ಪ್ರಹ್ಲಾದ್ ಜೋಷಿ ಅವರು, ನಿಮ್ಮ ಅಧಿಕಾರದ ದುರಾಸೆಗೆ ಕಾಂಗ್ರೆಸ್ಸಿನವರೇ ಆದ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ ಕೀರ್ತಿ ನಿಮಗೇ ಸಲ್ಲುತ್ತದೆ.
ಇದನ್ನು ಡಿ.ಕೆ.ಶಿವಕುಮಾರ್ ಅವರ ತಾಯಿಯೇ ಹೇಳಿದ್ದಾರೆ. ಅದನ್ನು ಮರೆತ ಸಿದ್ದರಾಮಯ್ಯನವರು, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇರೆಯವರು ಮುಗಿಸಿದರು ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಲ್ಲಿ ನೈತಿಕತೆ ಎನ್ನುವುದು ಏನಾದರೂ ಉಳಿದಿದೆಯಾ..? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ರಾಜಕೀಯ ನಡೆ ಬಗ್ಗೆ ಕಟುವಾಗಿ ಟೀಕಿಸಿರುವ ಅವರು, ಒಳ ಸಂಚು ಮತ್ತು ಷಡ್ಯಂತ್ರವನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರಿಗೆ ತಾವು ಮಾಡಿದ ಕುತಂತ್ರಗಳೇ ಬೇರೆ ಪಕ್ಷಗಳಲ್ಲೂ ಇರಬಹುದು ಎಂದು ಭಾಸವಾಗುತ್ತಿದೆ. ಏಕೆಂದರೆ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾÁ ಹಳದಿ ಎಂದು ಛೇಡಿಸಿದ್ದಾರೆ.
ಅಲ್ಲದೆ, ಸಿಎಂ ಆಗಿದ್ದ ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಲು ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಯಾವ ರೀತಿ ಕಾರಣರಾದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇ.ಡಿ. ಮತ್ತು ಸಿಬಿಐ ಬಳಸಿ ಪಕ್ಷವನ್ನು ಒಡೆದು ನೀವು ಯಾವ ರೀತಿಯಾಗಿ ಮುಖ್ಯಮಂತ್ರಿಯಾಗಿದ್ದೀರಿ ಎನ್ನುವುದೂ ಮರೆತಿದ್ದೀರಾ ಎಂದು ಜೋಷಿ ಅವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರ ಪ್ರತಿ ಟ್ವೀಟ್ಗೂ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವಿಟ್ಟರ್ನಲ್ಲೇ ತಿರುಗೇಟು ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಪ್ರಹ್ಲಾದ್ ಜೋಷಿಯವರ ನಡುವೆ ಇನ್ನೊಂದು ಸುತ್ತಿನ ರಾಜಕೀಯ ವಾಗ್ಯುದ್ಧ ನಡೆದಿದೆ.