ಬೆಂಗಳೂರು,ಜು.27- ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹತ್ಯೆ ನಡೆದ ಕೆಲವೇ ಕ್ಷಣದಲ್ಲಿ ಕಾರ್ಯ ಪ್ರವೃತರಾದ ಪೊಲೀಸರು ಕೇರಳ ಗಡಿ ಹಾಗೂ ಪುತ್ತೂರು ಸೇರಿದಂತೆ ವಿವಿಧೆಡೆ ನಾಕಾ ಬಂಧಿ ಮಾಡಿ ಐವರು ಶಂಕಿತರನ್ನು ಕರೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ನಡೆಸಿದ ಪಾತಕಿಗಳು ಕೇರಳ ನೋಂದಣಿಯ ಬೈಕ್ನಲ್ಲಿ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಕೇರಳದಲ್ಲೂ ಕೂಡ ವಿಶೇಷ ತಂಡ ತೆರಳಿ ಪರಿಶೀಲನೆ ನಡೆಸುತ್ತಿದೆ.
ಪ್ರಕರಣವನ್ನು ಭೇದಿಸಲು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದು, ಹಲವು ಮಹತ್ವದ ಸಂಗತಿಗಳನ್ನು ಕಲೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದಿರುವ ಐವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ.