ಬೆಂಗಳೂರು,ಜು.27- ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಬೇಕು ಎಂಬ ಸರ್ಕಾರಿ ಆದೇಶಕ್ಕೆ ಖಾಸಗೀ ಶಾಲೆಗಳ ಒಕ್ಕೂಟ ರುಪ್ಸಾ ವಿರೋಧ ವ್ಯಕ್ತಪಡಿಸಿದೆ. ಏಕಾಏಕಿ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿರುವುದರಿಂದ ಸಾಕಷ್ಟು ಸಮಸ್ಯೆ ಉದ್ಭವಿಸಲಿದೆ.
ಹಾಗಾಗಿ ಈ ಆದೇಶ ರದ್ದುಗೊಳಿಸಬೇಕು ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿರುವ ಇಂತಹ ಸಮಯದಲ್ಲಿ ಏಕಾಏಕಿ ವಯೋಮೀತಿ ಬದಲಾವಣೆ ಮಾಡಿದರೆ ಅದರಿಂದ ಸಾಕಷ್ಟು ಸಮಸ್ಯೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಎಲ್ಕೆಜಿಗೆ 3 ವರ್ಷ 5 ತಿಂಗಳ ವಯಸ್ಸು ನಿಗಪಡಿಸಲಾಗಿತ್ತು. ಒಂದನೇ ತರಗತಿಗೆ 5 ವರ್ಷ ಐದು ತಿಂಗಳಿನಿಂದ 7 ವರ್ಷಗಳ ವಯೋಮಿತಿ ನಿಗಪಡಿಸಲಾಗಿತ್ತು. ಇದೇ ನಿಯಮಗಳನ್ನು ಶಾಲೆಗಳು ಪಾಲಿಸಿಕೊಂಡು ಬರುತ್ತಿವೆ. ಆದರೆ, ಈಗ ದಾಖಲಾಗಿರುವ ಮಕ್ಕಳನ್ನು ಅದೇ ತರಗತಿಯಲ್ಲಿ ದುವರೆಸಬೇಕಾ ಅಥವಾ ಹಿಂದಿನ ತರಗತಿಗಳಿಗೆ ಪುನರ್ ದಾಖಲಾತಿ ಮಾಡಬೇಕಾ ಎಂಬ ಗೊಂದಲ ಎದುರಾಗಿದೆ.
ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸಿ ಗೊಂದಲ ಉಂಟು ಮಾಡುತ್ತಿದೆ. ಕೂಡಲೇ ಸರ್ಕಾರ ಹೊಸ ಆದೇಶವನ್ನು ಹಿಂಪಡೆದು ಗೊಂದಲ ಪರಿಹರಿಸುವಂತೆ ತಾಳಿಕಟ್ಟೆ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಹೊಸ ಆದೇಶದಲ್ಲಿ ಏನಿದೆ: ಪ್ರಾಥಮಿಕ ಶಾಲಾ ಮಕ್ಕಳ ದಾಖಲಾತಿಗೆ ಸರ್ಕಾರ ವಯೋಮಿತಿ ನಿಗಪಡಿಸಿ ಸುತ್ತೋಲೆ ಹೊರಡಿಸಿದೆ. ಜೂನ್ ಒಂದನೇ ತಾರೀಖಿಗೆ ಆರು ವರ್ಷ ಪೂರ್ಣಗೊಂಡ ಮಕ್ಕಳು ನೇರವಾಗಿ ಒಂದನೇ ತರಗತಿಗೆ ದಾಖಲು ಮಾಡಬಹುದಾಗಿದೆ.