ಬೆಂಗಳೂರು, ಜ.6- ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭದ್ರತೆ ಬಗೆಗಿನ ವಿವಾದ ದುರದೃಷ್ಟಕರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ದೇಶದ ಅತ್ಯುನ್ನತ ಕಾರ್ಯಾಂಗ ಆಡಳಿತಗಾರರಾದ ಪ್ರಧಾನಿಯವರ ರಕ್ಷಣೆ ವಿಷಯದಲ್ಲಿ ಹೀಗಾಗಬಾರದು. ನಾವು ಕಳೆದ ಘಟನೆಗಳಿಂದ ಪಾಠ ಕಲಿಯಬೇಕು ಎಂದು ದೇವೇಗೌಡರು ಟ್ವಿಟ್ ಮಾಡಿದ್ದಾರೆ.
ರಸ್ತೆ ಮೂಲಕ ಪಂಜಾಬ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಪ್ರತಿಭಟನಾಕಾರರ ರಸ್ತೆತಡೆ, ಪ್ರತಿಭಟನೆಯಿಂದಾಗಿ 15-20 ನಿಮಿಷ ಫ್ಲೈಓವರ್ ಒಂದರ ಮೇಲೆಯೇ ಸಿಲುಕಿಕೊಳ್ಳಬೇಕಾಯಿತು. ಈ ಘಟನೆ ಪ್ರಧಾನಿಯವರ ಭದ್ರತೆಯಲ್ಲಿ ಆದ ಭಾರೀ ಕರ್ತವ್ಯಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಬಣ್ಣಿಸಿತು.
ಹೀಗಿದ್ದರೂ ಮೋದಿ ಅವರು ರಾಜ್ಯಕ್ಕೆ ತಮ್ಮ ಭೇಟಿಯನ್ನು ಮೊಟಕುಗೊಳಿಸುವಂತಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ಸಿಂಗ್ ಚನ್ನಿ ಅವರು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
