ದಕ್ಷಿಣ ಕನ್ನಡ,ಆ.6- ಹತ್ಯೆಯಾದ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಾಲಿವುಡ್ ಚಿತ್ರ ನಿರ್ಮಾಪಕ ಮುನೀಶ್ ಮುಂದ್ರ 11 ಲಕ್ಷ ಪರಿಹಾರ ನೀಡಿದ್ದಾರೆ. ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿರುವ ಉದ್ಯಮಿ ಹಾಗು ಬಾಲಿವುಡ್ ಚಿತ್ರ ನಿರ್ಮಾಪಕ ಮುನೀಶ್ ಮುಂದ್ರ ಮೃತರ ಕುಟುಂಬಕ್ಕೆ ಸ್ವಾಂತ್ವಾನ ಹೇಳಿ 11 ಲಕ್ಷ ನೆರವು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರವೀಣ್ ಕುಟುಂಬದ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು ಆ ಬಳಿಕ 11 ಲಕ್ಷ ಹಣವನ್ನು ಪ್ರವೀಣ್ ಪತ್ನಿ ನೂತನ ಅವರ ಖಾತೆಗೆ ವರ್ಗಾಯಿಸುವುದಾಗಿ ತಿಳಿಸಿದ್ದಾರೆ.
ಮುನೀಶ್ ಮುಂದ್ರ ಅವರು 2017ರಲ್ಲಿ ಧನಕ್ ಎಂಬ ಅತ್ಯುತ್ತಮ ಚಿತ್ರ ನಿರ್ಮಾಣ ಮಾಡಿದ್ದರು. ಈ ಚಿತ್ರ ಮಕ್ಕಳ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಇವರ ನಿರ್ಮಾಣದ ನ್ಯೂಟನ್ ಎಂಬ ಚಿತ್ರ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಮುನೀಶ್ ಮುಂದ್ರ ಅವರು ಕೊರೊನಾ ಸಮಯದಲ್ಲಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ಗಳನ್ನು ನೀಡುವ ಮೂಲಕ ನೆರವು ನೀಡಿದ್ದರು.