ಕಲಬುರಗಿ,ಜ.24- ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಶರಣಾಗಿರುವ ಆರೋಪಿ ಆರ್.ಡಿ.ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ತನಿಖಾಧಿಕಾರಿಗಳೇ ಲಂಚದ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾನೆ.
ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಆತ, ಪ್ರಕರಣವನ್ನು ಮುಚ್ಚಿ ಹಾಕಲು ಸಿಐಡಿ ತನಿಖಾಧಿಕಾರಿ ಶಂಕರ್ ಗೌಡ ಪಾಟೀಲ್ ಅವರು ಹಣದ ಬೇಡಿಕೆ ಇಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾನೆ.
ಶಂಕರ್ಗೌಡ ಪಾಟೀಲ್ ಅವರು ಮೂರು ಕೋಟಿ ಹಣ ಬೇಡಿಕೆ ಇಟ್ಟಿದ್ದರು. ಈಗಾಗಲೇ 76 ಲಕ್ಷ ಕೊಟ್ಟಿದ್ದೇನೆ. ಸಾಕ್ಷಿ ಸಮೇತ ಲೋಕಾಯುಕ್ತ, ಸಿಐಡಿ ವಿಭಾಗದ ಎಡಿಜಿಪಿ ಹಾಗೂ ಎಡಿಜಿಪಿ ಅಲೋಕ್ಕುಮಾರ್ ಮತ್ತು ಗೃಹ ಸಚಿವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಕೇವಲ ನನ್ನಿಂದ ಮಾತ್ರವಲ್ಲ ಪ್ರಕರಣದ ಎಲ್ಲಾ ಆರೋಪಿಗಳಿಂದ ಹಣ ಪಡೆದಿದ್ದಾರೆ. ತನಿಖೆ ವೇಳೆ ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದೇನೆ ಎಂದಿದ್ದರು. ತನಿಖೆಗೆ ಒಬ್ಬರೇ ಅಧಿಕಾರಿ ಬಂದಿದ್ದರೇ? ಅಧಿಕಾರಿಗಳನ್ನು ತಳ್ಳಿ ಪರಾರಿಯಾಗುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾನೆ.
ಪಿಎಸ್ಐ ಪ್ರಕರಣ ಮಾತ್ರವಲ್ಲ ಬೇರೆ ಬೇರೆ ಪ್ರಕರಣಗಳು ನಿನ್ನ ಮೇಲೆ ಇವೆ ಎಂದಿದ್ದಾರೆ. ಸುಮ್ಮನೆ ಯಾಕೆ ತಿರುಗಾಡುವೆ ನಮ್ಮೊಂದಿಗೆ ರಾಜಿಯಾಗು ಎಂದಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಮಲ್ಲಿಕಾರ್ಜುನ ಅವರಿಂದ ನನ್ನ ಅಳಿಯ ಹಣ ತಂದುಕೊಟ್ಟಿದ್ದಾನೆ. ನನ್ನ ಅಳಿಯ ಶ್ರೀಕಾಂತ್ ಮೂಲಕ ಸಿಐಡಿ ಡಿವೈಎಸ್ಪಿ ಶಂಕರಗೌಡ ಅವರಿಗೆ 76 ಲಕ್ಷ ಹಣ ತಂದುಕೊಟ್ಟಿದ್ದಾನೆ ಎಂದು ಸಿಐಡಿ ಅಧಿಕಾರಿಗಳ ವಿರುದ್ಧ ಪಿಎಸ್ಐ ಕಿಂಗ್ಪಿನ್ ಆರ್.ಡಿ ಪಾಟೀಲ್ ದೂರಿದ್ದಾನೆ.
ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ ಬಳಿಕ ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ತನಿಖಾಧಿಕಾರಿಗಳೇ ಹಣದ ಬೇಡಿಕೆ ಇಟ್ಟಿರುವ ವಿಡಿಯೋ ಈಗ ಭಾರೀ ವೈರಲ್ ಆಗಿದೆ.
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆರ್.ಡಿ.ಪಾಟೀಲ್ ಎಲ್ಲಾದರೂ ಕಂಡುಬಂದರೆ ಸಾರ್ವಜನಿಕರು ಕೂಡಲೇ ಮಾಹಿತಿ ನೀಡಬೇಕೆಂದು ಸಿಐಡಿ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು.
ಆರ್.ಡಿ ಪಾಟೀಲ್ ಪಿಎಸ್ಐ ಅಕ್ರಮದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಪಾಟೀಲ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಹಾಗೂ ರಾಮೂರ್ತಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಸಿಐಡಿ ಪೊಲೀಸರು ಬಂಧಿಸಲು ಹೋದಾಗ ಕಣ್ತಪ್ಪಿಸಿ ಪರಾರಿಯಾಗಿದ್ದ. ಎರಡು ಪ್ರಕರಣದಲ್ಲೂ ಆರ್.ಡಿ ಪಾಟೀಲ್ಗಾಗಿ ದಸ್ತಗಿರಿ ವಾರೆಂಟ್ನ್ನು ನ್ಯಾಯಾಲಯ ಹೊರಡಿಸಿತ್ತು. ಪೊಲೀಸರು ಆರೋಪಿ ಆರ್.ಡಿ ಪಾಟೀಲ್ಗಾಗಿ ಹುಡುಕಾಟ ನಡೆಸುತ್ತಿದ್ದರು.
PSI, scam, kingpin, R D Patil, Video, CID, investigation,