ಬೆಂಗಳೂರು, ಜು.12- ಪಿಎಸ್ಐ ಹಗರಣದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಮಗ ಯಾರು, ಇನ್ಯಾವ ದೊಡ್ಡವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸಿದೆ.
ಮುಖ್ಯಮಂತ್ರಿ ಬಸವರರಾಜ ಬೊಮ್ಮಾಯಿ ಅವರೆ ಶಾಸಕ ಯತ್ನಾಳ್ ಪಿಎಸ್ಐ ಹಗರಣದ ಬಗ್ಗೆ ಹೇಳಿದ್ದನ್ನ ಕೇಳಿದ್ದೀರಾ? ಅವರ ಬಳಿ ಹಗರಣದ ಎಲ್ಲಾ ಮಾಹಿತಿ ಇದೆಯಂತೆ. ಅವರ ವಿಚಾರಣೆ ಯಾವಾಗ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಯತ್ನಾಳ್ ತಮ್ಮ ಹೇಳಿಕೆಯಲ್ಲಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ಕುರಿತು ಪ್ರಸ್ತಾಪಿಸಿದ್ದಾರೆ. ಆ ವ್ಯಕ್ತಿ ಯಾರು ? ಹಗರಣದಲ್ಲಿ ಭಾಗಿಯಾಗಿರುವ ದೊಡ್ಡವರು ಯಾರು, ಯಾರಿಗೆಲ್ಲಾ ಕಿಕ್ ಬ್ಯಾಕ್ ಹೋಗಿದೆ ಎಂದು ಪ್ರಶ್ನಿಸಲಾಗಿದೆ.
ಸರ್ಕಾರ ಪಿಎಸ್ಐ ಹಗರಣದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಹೆದರುತ್ತಿರುವುದೇಕೆ ಎಂದು ಲೇವಡಿ ಮಾಡಲಾಗಿದೆ.