ಬೆಂಗಳೂರು,ಸೆ.20- ಪಿಎಸ್ಐ ಹಗರಣದ ಪರಿಣಾಮಕಾರಿ ತನಿಖೆಗಾಗಿ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸುತ್ತಿರುವ ಯುವ ಸಮೂಹವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಭೇಟಿ ಮಾಡಿದರು. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪಿಎಸ್ಐ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳ ಆಕಾಂಕ್ಷಿಗಳು ನಗರದ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ.
ಸರ್ಕಾರದ ಪರವಾಗಿ ಈವರೆಗೂ ಯಾರೂ ಅವರನ್ನು ಭೇಟಿ ಮಾಡಿ ಬೇಡಿಕೆ ಆಲಿಸುವ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ ತೆರಳಿ ಧರಣಿ ನಿರತರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ : ಮೆಕ್ಸಿಕೋದಲ್ಲಿ ಭಾರೀ ಭೂಕಂಪ..!
ಪಿಎಸ್ಐ ಹಗರಣ ರಾಜ್ಯದ ಇತಿಹಾಸದಲ್ಲೇ ಕಂಡರಿಯದ ಹವ ಸೃಷ್ಟಿಸಿದೆ. ಎಡಿಜಿಪಿ ಹಂತದ ಅಧಿಕಾರಿ ಸೇರಿದಂತೆ ಹಲವಾರು ಮಂದಿ ಬಂಧನಕ್ಕೊಳಗಾಗಿದ್ದಾರೆ. ಕಾಂಗ್ರೆಸ್ ಈ ಹಗರಣದ ಚರ್ಚೆಗಾಗಿ ವಿಧಾನಸಭೆ ಮತ್ತು ಪರಿಷತ್ನಲ್ಲಿ ಮನವಿ ಸಲ್ಲಿಸಿದೆ. ಚರ್ಚೆಗೆ ಸಭಾಧ್ಯಕ್ಷರು ಸಮ್ಮಿತಿಸದರಾದರೂ ಈವರೆಗೂ ಅವಕಾಶ ಸಿಕ್ಕಿಲ್ಲ.
ಪಿಎಸ್ಐ ನೇಮಕಾತಿ ಹಣಗರದಲ್ಲಿ ಕೆಳಹಂತದ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರಕಷ್ಟೇ ಸೀಮಿತವಾಗಿ ತನಿಖೆ ನಡೆಯುತ್ತಿದೆ. ಸಂಗ್ರಹ ಮಾಡಲಾದ ಹಣವನ್ನು ಸರ್ಕಾರಕ್ಕೆ ತಲುಪಿಸಿದ್ದೇವೆ ಎಂದು ಶಾಸಕ ಬಸವರಾಜ ದಡೆಸೂರು ಸೇರಿದಂತೆ ಹಲವಾರು ಮಂದಿ ಹೇಳಿಕೆ ನೀಡಿದ್ದಾರೆ.
ಸರ್ಕಾರ ಎಂದರೆ ಯಾರು ? ಲಂಚರೂಪದಲ್ಲಿ ವಸೂಲಿ ಆದ ಕೋಟ್ಯಂತರ ರೂಪಾಯಿ ಯಾರ ಪಾಲಾಗಿದೆ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ರಾಜ್ಯ ಸರ್ಕಾರದಲ್ಲಿ ಸುಮಾರು ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಪಾರದರ್ಶಕ ಪ್ರಕ್ರಿಯೆಗಳ ಮೂಲಕ ನೇಮಕಾತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ರಾಜಸ್ಥಾನದ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಭ್ಯರ್ಥಿಗಳ ಒತ್ತಾಯ. ಸಿದ್ದರಾಮಯ್ಯ ಅವರ ಭೇಟಿಯಿಂದಾಗಿ ಪ್ರತಿಭಟನೆಯ ಬಲ ಹೆಚ್ಚಾಗಿದೆ.