ಬೆಂಗಳೂರು, ಜ.8-ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮೊದಲ ಕಂಚಿನ ಪುತ್ಥಳಿ ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್ಕುಮಾರ್ ಗಾಜಿನ ಮನೆ ಮುಂಭಾಗವಿರುವ ಮೇಯರ್ ಮುತ್ತಣ್ಣ ಡಾ.ರಾಜ್ಕುಮಾರ್ ಪ್ರತಿಮೆ ಪಕ್ಕದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಅವರ ಪ್ರತಿಮೆ ಪ್ರತಿಷ್ಠಾಪಿಸಲು ಬಿಬಿಎಂಪಿ ಅಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅನುಮತಿ ನೀಡಿದ್ದಾರೆ.
ಪುನಿತ್ರಾಜ್ಕುಮಾರ್ ಅವರ ಅಕಾಲಿಕ ನಿಧನದ ನಂತರ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ಪದಾಕಾರಿಗಳು ಪುನಿತ್ ಅವರ ಪ್ರತಿಮೆ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಕುರಿತಂತೆ ಸರ್ವೋಚ್ಚ ಹಾಗೂ ಉಚ್ಛ ನ್ಯಾಯಲಯಗಳು ನೀಡಿರುವ ತೀರ್ಪಿನ ಉಲ್ಲಂಘನೆಯಾಗದಂತೆ ಪ್ರತಿಮೆ ಪ್ರತಿಷ್ಠಾಪನೆ ಮಾಡಿದರೆ ಕಾನೂನು ತೊಡಕು ಎದುರಾಗುವುದಿಲ್ಲ ಎಂಬ ಕಾನೂನು ಅಭಿಪ್ರಾಯದ ನಂತರ ಪವರ್ಸ್ಟಾರ್ ಪುನಿತ್ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಗೆ ಆಡಳಿತಾಧಿಕಾರಿ ರಾಕೇಶ್ಸಿಂಗ್ ಅವರು ಅನುಮೊದನೆ ನೀಡಿದ್ದಾರೆ.
ಹೀಗಾಗಿ ನಾವು ಪುನಿತ್ ಅವರ ಕಂಚಿನ ಪುತ್ಥಳಿ ಸಿದ್ದಪಡಿಸಿದ್ದೇವೆ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ.
ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದರೆ ಪ್ರತಿಮೆ ಪ್ರತಿಷ್ಠಾಪನೆಗೆ ದಿನಾಂಕ ನಿಗಪಡಿಸಲಿದ್ದೇವೆ ಎಂದು ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ್ರಾಜ್ ಈ ಸಂಜೆಗೆ ತಿಳಿಸಿದ್ದಾರೆ.
