ಬೆಂಗಳೂರು, ಆ.11- ಜಯನಗರದ ಐದನೇ ಬಡಾವಣೆಯಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 351ನೇ ಶ್ರೀ ರಾಘವೇಂದ್ರ ಸ್ವಾಮಿಗಳ ಸಪ್ತ ರಾತ್ರೋತ್ಸವದ ಅಂಗವಾಗಿ ಇಂದಿನಿಂದ ಒಂದು ವಾರಗಳ ಕಾಲ ಆರಾಧನ ಕಾರ್ಯಕ್ರಮ ನೆರವೇರಲಿದೆ.
ಇಂದು ಗೋಪೂಜೆ, ಧ್ವಜಾರೋಹಣ, ಧನ-ಧಾನ್ಯ ಹಾಗೂ ನೂತನವಾಗಿ ನಿರ್ಮಿಸಲಾದ ನವರತ್ನ ಕವಚದ ಪೂಜೆಯೊಂದಿಗೆ ಉದ್ಘಾಟನೆಯನ್ನು ಆರ್.ಕೆ. ವಾದಿಂದ್ರಾ ಆಚಾರ್ಯರು ಹಾಗೂ ಜಿ.ಕೆ.ಆಚಾರ್ಯರು ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಮಠದ ವ್ಯವಸ್ಥಾಪಕ ಆರ್.ಕೆ. ವಾದಿಂದ್ರಾಚಾರ್ಯರು, ಭಕ್ತರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ. 12ರಿಂದ 14ರವರೆಗೂ ವಿಶೇಷ ಪೂಜೆ ನಡೆಯಲಿದೆ. ಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
14ರಂದು ಬೆಳಗ್ಗೆ 9 ಗಂಟೆಗೆ ಜಯನಗರದ ರಾಜಬೀದಿಗಳಲ್ಲಿ ಮಹಾ ರಥೋತ್ಸವ ನೆರವೇರಲಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ. ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಆಕರ್ಷಣೆ ಹೂವಿನಿಂದ ಕಂಗೊಳಿಸಿದ ರಾಯರ ಪ್ರಾಕಾರ ಹಾಗೂ ಧನ ಧಾನ್ಯ ಫಲಗಳಿಂದ ಕೂಡಿದ ಉತ್ಸವಗಳ ಅಲಂಕಾರ ವಿಶೇಷವಾಗಿತ್ತು. ಭಕ್ತರು ಹಾಗೂ ಸಿಬ್ಬಂದಿ ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.