ನವದೆಹಲಿ, ಫೆ.28- ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ಮತ್ತು ನಾಗರಿಕರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಸ್ಥಳಾಂತರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಒತ್ತಾಯಿಸಿದ್ದಾರೆ.
ಉಕ್ರೇನ್ ನಿಂದ ವಿದ್ಯಾರ್ಥಿಗಳು ಕಳುಹಿಸಿರುವ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕರುಣಾಜನಕ ಸ್ಥಿತಿಯಲ್ಲಿರುವ ಭಾರತೀಯರನ್ನು ನೋಡಲು ಹಿಂಸೆಯಾಗುತ್ತಿದೆ ಎಂದಿದ್ದಾರೆ.
ಹಿಂಸಾಚಾರದಿಂದ ಬಳಲುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರನ್ನು ನೋಡಲು ಮುಜುಗರವಾಗುತ್ತಿದೆ. ಯಾವುದೇ ಪೋಷಕರಿಗೂ ಈ ಸ್ಥಿತಿ ಬರಬಾರದು. ಉಕ್ರೇನ್ ನಲ್ಲಿ ಸಿಕ್ಕಿಬಿದ್ದವರ ಸ್ಥಳಾಂತರವನ್ನು ಚುರುಕುಗೊಳಿಸಿ. ನಾವು ನಮ್ಮ ಸ್ವಂತ ಜನರನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿಯ ಬಳಿಕ ಹಲವಾರು ಕಾಂಗ್ರೆಸ್ ನಾಯಕರು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ವೀಡಿಯೋಗಳನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ. ಕೆಲವರು ಹಂಚಿಕೊಂಡಿರುವ ವಿಡಿಯೋದಲ್ಲಿ ಸೇನೆ ಇಲ್ಲಿ ನಮಗೆ ಕಿರುಕೂಳ ನೀಡುತ್ತಿದೆ ಎಂಬ ಆರೋಪಗಳಿವೆ.
ದುಃಸ್ಥಿತಿಯಲ್ಲಿರುವ ನಮಗೆ ಭಾರತಕ್ಕೆ ವಾಪಾಸಾಗಲು ಸಹಾಯ ಮಾಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಟಾಟಾ ಸಮೂಹದ ಒಡೆತನಕ್ಕೆ ಇತ್ತೀಚೆಗಷ್ಟೆ ಜಾರಿದ ಏರ್ ಇಂಡಿಯಾದ ವಿಮಾನಗಳ ಮೂಲಕ ಉಕ್ರೇನ್ ನಲ್ಲಿದ್ದ ಭಾರತೀಯರನ್ನು ಕರೆ ತರಲಾಗುತ್ತಿದೆ.
ಈವರೆಗೂ ಐದು ವಿಮಾನಗಳಲ್ಲಿ ಪ್ರಯಾಣಿಕರನ್ನು ಕರೆ ತರಲಾಗಿದೆ. ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂಕಷ್ಟದಲ್ಲಿದ್ದವರನ್ನು ನೆರೆಯ ರಾಷ್ಟ್ರಗಳಿಗೆ ಸ್ಥಳಾಂತರ ಮಾಡಿ ಸುರಕ್ಷತೆ ಖಾತ್ರಿ ನೀಡಬೇಕು ಎಂಬ ಸಲಹೆಗಳನ್ನು ಕಾಂಗ್ರೆಸ್ ನ ಹಲವು ನಾಯಕರು ನೀಡಿದ್ದಾರೆ.
