ಚೆನೈ, ಆ.22- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ತಮಿಳುನಾಡಿನ ಶ್ರೀಪೆರಂಬೂರಿನಲ್ಲಿರುವ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಭೂಮಿಗೆ ನಮನ ಸಲ್ಲಿಸಿದ ಬಳಿಕ ಭಾರತ್ ಜೋಡೋ ಯಾತ್ರೆ ಆರಂಭಿಸಲಿದ್ದಾರೆ.
1991ರ ಮೇ 21ರಂದು ಶ್ರೀಪೆರಂಬೂರಿನಲ್ಲಿ ಧನು ಎಂಬುವರು ಆತ್ಮಾಹತ್ಯಾ ದಾಳಿ ನಡೆಸಿದ್ದರಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಆ ಸ್ಥಳಕ್ಕೆ ರಾಹುಲ್ಗಾಂಧಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಮಿಳುನಾಡಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ.ಸೆಲ್ವಪೆರುಂತಗೈ ತಿಳಿಸಿದ್ದಾರೆ.
ಸೆಪ್ಟಂಬರ್ 7ರಂದು ರಾಜೀವ್ ಪುಣ್ಯಭೂಮಿಗೆ ಭೇಟಿ ನೀಡುವ ರಾಹುಲ್ಗಾಂಧಿ, ತಂದೆಯ ಪುಣ್ಯಭೂಮಿಗೆ ನಮನ ಮತ್ತು ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆಯಲಿದ್ದಾರೆ.
ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ ಪಾದಯಾತ್ರೆ ಆರಂಭಿಸಲಿದ್ದಾರೆ. ತಮಿಳುನಾಡಿನಲ್ಲಿ ಈ ಯಾತ್ರೆ ನಾಲ್ಕು ದಿನ ನಡೆಯಲಿದ್ದು ಸೆಪ್ಟಂಬರ್ 10ರಂದು ಕೇರಳಕ್ಕೆ ಭೇಟಿ ನೀಡಲಿದೆ. ಅಲ್ಲಿಂದ ಕರ್ನಾಟಕ ಪ್ರವೇಶಿಸಲಿದೆ. ಪೊಲೀಸರು ರಾಹುಲ್ಗಾಂಧಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಶ್ರೀಪೆರಂಬೂರು ಪುಣ್ಯಭೂಮಿಯನ್ನು ಪರಿಶೀಲಿಸಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.