ಪಣಜಿ, ಫೆ.3- ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆಗಳು ತಾರಕಕ್ಕೇರುತ್ತಿರುವ ಬೆನ್ನನ್ನೇ ಸಂಪುಟ ಸೇರಲು ರಮೇಶ್ ಜಾರಕಿಹೊಳಿ ಕಸರತ್ತು ಆರಂಭಿಸಿದ್ದಾರೆ. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತರಲು ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಪಣಜಿಗೆ ತೆರಳಿದ್ದರು. ಗೋವಾದ ಪಣಜಿಯಲ್ಲಿರುವ ಹೋಟೆಲïನಲ್ಲಿ ತಂಗಿರುವ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ ರಮೇಶ್ರಜಾಕಿಹೊಳಿ ಸುದೀರ್ಘ ಮಾತುಕತೆ ನಡೆಸಿದರು.
ಬಿಜೆಪಿ ಸರ್ಕಾರ ತರಲು ಕಾರಣವಾಗಿದ್ದ ನಮ್ಮನ್ನು ಸಂಪುಟದಿಂದ ದೂರ ಇಡಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸಂಪುಟದಿಂದ ಕೈಬಿಡಲಾಗಿದೆ. ಇನ್ನು ಶ್ರೀಮಂತ ಪಾಟೀಲ ಅವರನ್ನು ಯಾವುದೇ ಕಾರಣ ನೀಡದೆ ಸಂಪುಟದಿಂದ ಕೈಬಿಡಲಾಗಿದೆ. ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡಲಾಗಿಲ್ಲ.
ಸರ್ಕಾರ ರಚನೆಯಲ್ಲಿ ಪಾತ್ರ ನಿರ್ವಹಿಸದೆ ಇದ್ದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರೆಲ್ಲ ಪವರ್ ಎಂಜಾಯ್ ಮಾಡುತ್ತಿದ್ದರೆ ನಾವು ಮಾತ್ರ ಹೊರಗಿದ್ದೇವೆ. ಹಾಗಾಗಿ ಈ ಬಾರಿ ಸಂಪುಟ ವಿಸ್ತರಣೆ ವೇಳೆ ನಮ್ಮನ್ನು ಪರಿಗಣಿಸಲು ಹೈಕಮಾಂಡ್ ನಾಯಕರ ಮನವೊಲಿಸುವಂತೆ ರಮೇಶ್ ಜಾರಕಿಹೊಳಿ ಫಡ್ನವಿಸ್ ಅವರಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಹಾಗೂ ಮಹೇಶ ಕುಮಟಳ್ಳಿ ಬಿಜೆಪಿಗೆ ಬಂದಿದ್ದರು. ಹೀಗಾಗಿ ದೇವೇಂದ್ರ ಫಡ್ನವಿಸ್ ಮೂಲಕವೇ ಹೈಕಮಾಂಡ್ ಅಂಗಳಕ್ಕೆ ತಮ್ಮ ಸಂದೇಶ ತಲುಪಿಸಲು ರಮೇಶ್ ಜಾರಕಿಹೊಳಿ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಗೆ ಬೆಳಗಾವಿ ಬಿಜೆಪಿ ಮುಖಂಡ ಕಿರಣ್ ಜಾಧವ್ ಸಾಥ್ ನೀಡಿದ್ದಾರೆ.
