ನವದೆಹಲಿ, ಜ.15- ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮದಿನದ ಮೂಲಕ ಗಣರಾಜ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜನವರಿ 26 ಗಣರಾಜ್ಯೋತ್ಸವವರಾದರೆ ಜನವರಿ 23ರ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾಗಿದೆ.
ಸಾಮಾನ್ಯವಾಗಿ ಗಣರಾಜ್ಯತ್ಸವದ ಆಚರಣೆಗಳು ಜನವರಿ 24ರಿಂದ ಆರಂಭವಾಗುತ್ತಿದ್ದವು. ಇನ್ನು ಮುಂದೆ ನೇತಾಜಿ ಜನ್ಮ ದಿನಾಚರಣೆಯ ಜೊತೆಯಲ್ಲಿ ಗಣರಾಜ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ದೇಶದ ಇತಿಹಾಸ ಮತ್ತು ಸಂಸ್ಕøತಿಯ ಅರಿವು ಮೂಡಿಸಲು ಎರಡು ದಿನಗಳ ಕಾಲಾವಕಾಶ ಲಭ್ಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನೇತಾಜಿ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಲವು ಆಚರಣೆಗಳನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಆಗಸ್ಟ್ 14ನ್ನು ದೇಶ ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 31 ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ, ನವೆಂಬರ್ 15ನ್ನು ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಜನಜಾತಿಯ ಗೌರವ್ ದಿವಸ್ ಆಗಿ ಆಚರಿಸಲಾಗುತ್ತಿದೆ.
