Friday, April 19, 2024
Homeರಾಜ್ಯರೂಪಾ-ಸಿಂಧೂರಿ ಪ್ರಕರಣ : ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದ ಸುಪ್ರೀಂ

ರೂಪಾ-ಸಿಂಧೂರಿ ಪ್ರಕರಣ : ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದ ಸುಪ್ರೀಂ

ನವದೆಹಲಿ,ಜ.12- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪ ಪ್ರಕರಣವನ್ನು ಒಂದು ತಿಂಗಳೊಳಗೆ ಸೌಹಾರ್ದಯುತವಾಗಿ ಇಬ್ಬರೂ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸಲಹೆ ಮಾಡಿದೆ. ಇಬ್ಬರೂ ಅಧಿಕಾರಿಗಳು ಉನ್ನತ ಸ್ಥಾನಮಾನದಲ್ಲಿದ್ದೀರಿ. ನಿಮಗೆ ಉಜ್ವಲ ಭವಿಷ್ಯವಿದೆ. ಯೋಚಿಸಿ ಆಲೋಚನೆ ಮಾಡಿ. ಹಠದಿಂದ ಏನನ್ನೂ ಸಧಿಸಲು ಸಾಧ್ಯವಿಲ್ಲ. ನಿಮ್ಮಿಬ್ಬರಿಗೂ ಒಂದು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ವಿವಾದವನ್ನು ಸುಖಾಂತ್ಯಗೊಳಿಸಿ ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಆದರೆ ನ್ಯಾಯಾಲಯದ ಮನವಿಯನ್ನು ಒಪ್ಪದ ರೋಹಿಣಿ ಸಿಂಧೂರಿ ನನ್ನ ವಿರುದ್ಧ ಮಾನಹಾನಿ ಪೋಸ್ಟ್ ಮಾಡಿರುವ ಡಿ.ರೂಪಾ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಅರ್ಜಿ ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಲಾಯಿತು. ಮುಂದುವರೆದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಓ.ಕಾ ಅವರಿದ್ದ ಏಕಸದಸ್ಯ ಪೀಠ, ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳೇ ಪರಸ್ಪರ ಹೀಗೆ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದರೆ ಸಾರ್ವಜನಿಕರಿಗೆ ನೀವು ಕೊಡುವ ಸಂದೇಶವಾದರೂ ಏನು ಎಂದು ಪ್ರಶ್ನೆ ಮಾಡಿತು.

ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರೂ ಪರಸ್ಪರ ಜಿದ್ದಿಗೆ ಬಿದ್ದವರಂತೆ ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದೀರಿ ನಿಮ್ಮಿಬ್ಬರಿಗೂ ಒಳ್ಳೆಯ ಭವಿಷ್ಯವಿದೆ. ನ್ಯಾಯಾಲಯದ ಆಚೆಗೂ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಹಿತದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ನ್ಯಾಯಾೀಧಿಶರು ಕಿವಿಮಾತು ಹೇಳಿದರು.

ಆಘಾತವಾಗಿದೆ:
ಇದಕ್ಕೆ ರೋಹಿಣಿ ಸಿಂಧೂರಿ ಪರ ವಕೀಲರು, ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್‍ಗಳನ್ನು ತೆಗೆದು ಹಾಕಬಹುದು, ಇಲ್ಲವೇ ಡಿಲೀಟ್ ಮಾಡಬಹುದು. ಆದರೆ ಅವರ ಕುಟುಂಬಕ್ಕೆ ಆಗಿರುವ ಮಾನಹಾನಿಯನ್ನು ಯಾರು ಸರಿಪಡಿಸುತ್ತಾರೆ. ಡಿ.ರೂಪ ಪೋಸ್ಟ್ ಮಾಡಿದ ನಂತರ ಅವರ ಕುಟುಂಬ ಘಾಸಿಗೊಳಗಾಗಿದೆ. ಉನ್ನತ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮೌನವನ್ನೇ ದೌರ್ಬಲ್ಯವೆಂದು ಭಾವಿಸಬಾರದು. ಇನ್ನು ಕೂಡ ನಾವು ಮೌನವಾಗಿರಲು ಸಾಧ್ಯವೇ? ನ್ಯಾಯಾಲಯ ನೀಡುವ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಅದಕ್ಕೂ ಮುನ್ನ ನನ್ನ ವಿರುದ್ಧ ಪೋಸ್ಟ್ ಮಾಡಿರುವುದಕ್ಕೆ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

ಬಿಜೆಪಿಯ ನಾಯಕರು ಸಾಲುಸಾಲಾಗಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡುತ್ತಿರೋದೇಕೆ..?

ಅವರಿಂದಲೂ ಹಾನಿಯಾಗಿದೆ:
ಇನ್ನು ಡಿ.ರೂಪ ಪರ ವಾದ ಮಂಡಿಸಿದ ವಕೀಲರು ರೋಹಿಣಿ ಸಿಂಧೂರಿ ಕೂಡ ನಮ್ಮ ಪಿರಿಯಾದುದಾರರಿಗೆ ಮಾನಹಾನಿಯಾಗುವಂತೆ ಟೀಕಿಸಿದ್ದಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿರುವುದು ಮಾಧ್ಯಮದಲ್ಲಿ ಪ್ರಕಟಗೊಂಡಿದೆ. ಅವಹೇಳನಕಾರಿಯಾಗಿ ಮಾತನಾಡಿರುವಾಗ ಕ್ಷಮೆಯನ್ನು ಏಕೆ ಕೇಳಬೇಕು ಎಂದರು. ನ್ಯಾಯಾಲಯದ ನಿರ್ದೇಶನದಂತೆ ಸಾಮಾಜಿಕ ಜಾಲತಾಣದಿಂದ ಮಾಡಿದ್ದ ಪೋಸ್ಟ್‍ನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಅರ್ಜಿದಾರರು ಪುನಃ ನಮ್ಮ ಮೇಲೆ ಆರೋಪಗಳನ್ನು ಮುಂದುವರೆಸಿದ್ದಾರೆ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.ಎರಡು ಕಡೆ ವಾದ-ವಿವಾದ ಆಲಿಸಿದ ನ್ಯಾಯಪೀಠ ಒಂದು ತಿಂಗಳ ಕಾಲಾವಕಾಶ ನೀಡಿ ಮಾ.15ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಏನಿದು ಆಕ್ಷೇಪಾರ್ಹ ಪೋಸ್ಟ್?:
2023ರ ಫೆಬ್ರುವರಿಯಲ್ಲಿ ಡಿ. ರೂಪಾ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪ ಮಾಡಿದ್ದರು. ಈ ಆರೋಪಗಳು ಕೀಳು ಅಭಿರುಚಿಯಿಂದ ಕೂಡಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೋಹಿಣಿ ಸಿಂಧೂರಿ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ರದ್ದುಪಡಿಸಬೇಕೆಂದು ಕೋರಿ ಡಿ. ರೂಪಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

2023ರ ಫೆಬ್ರುವರಿ 14 ಹಾಗೂ 16 ರಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ತಮ್ಮ ಪರಿಶೀಲಿಸಿದ ಫೇಸ್ಬುಕ್ ಖಾತೆಯಲ್ಲಿ ಐಎಎಸ್ ಅಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದರು. ಈ ಆರೋಪಗಳು ಕೀಳು ಅಭಿರುಚಿಯಿಂದ ಕೂಡಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೋಹಿಣಿ ಸಿಂಧೂರಿ ಈ ಕುರಿತಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲು ಮಾಡಿದ್ದ ರೋಹಿಣಿ ಸಿಂಧೂರಿ, 1 ಕೋಟಿ ರೂಪಾಯಿ ಪರಿಹಾರವನ್ನು ಡಿ. ರೂಪಾ ಅವರಿಂದ ವಸೂಲಿ ಮಾಡಿಕೊಡಿಸಬೇಕು ಎಂದು ಮನವಿ ಮಾಡಿದ್ದರು.

RELATED ARTICLES

Latest News